ಲಂಡನ್ (ಪಿಟಿಐ): ಶಿವಸೇನಾವು ಇಬ್ಭಾಗವಾಗಿ ಏಕನಾಥ ಶಿಂದೆ ನೇತೃತ್ವದಲ್ಲಿ ಕೆಲವು ನಾಯಕರು ಪಕ್ಷದಿಂದ ಹೊರಬಂದು, ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದ ಶಾಸಕರ ಅನರ್ಹತೆ ಕುರಿತ ವಿಷಯವನ್ನು ಆದಷ್ಟು ಬೇಗ ನಿರ್ಣಯಿಸುವುದಾಗಿ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಹೇಳಿದ್ದಾರೆ.
ಮಹಾ ವಿಕಾಸ ಆಘಾಡಿ ಸರ್ಕಾರವು ಪತನಗೊಂಡ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಶಾಸಕರ ಅನರ್ಹತೆ ಕುರಿತು ಸಾಧ್ಯವಾದಷ್ಟು ಬೇಗನೆ ನಿರ್ಣಯ ಕೈಗೊಳ್ಳುವಂತೆ ಸ್ವೀಕರ್ಗೆ ನ್ಯಾಯಾಲಯ ಸೂಚಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್ ರಾಹುಲ್ ಅವರು, ‘ಕಾಲಮಿತಿಯೊಳಗೆ ನಿರ್ಣಯ ಕೈಗೊಳ್ಳುವುದು ಕಷ್ಟವಿದೆ’ ಎಂದರು.
‘ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಆದ್ದರಿಂದ ಕಾಲಮಿತಿಯೊಳಗೆ ನಿರ್ಣಯ ಕೈಗೊಳ್ಳುವುದು ಕಷ್ಟವೇ ಸರಿ. ಇದಕ್ಕಿಂತ ಮೇಲಾಗಿ, ಅಂದಿನ ದಿನ ಯಾವ ರಾಜಕೀಯ ಪಕ್ಷಕ್ಕೆ ವಿಪ್ ಜಾರಿಗೊಳಿಸುವ ಅಧಿಕಾರವಿತ್ತು ಎಂಬುದನ್ನೂ ವಿಮರ್ಶಿಸಬೇಕಿದೆ. ಹೀಗಿದ್ದರೂ ಆದಷ್ಟು ಬೇಗ ಎಲ್ಲವನ್ನೂ ಬಗೆಹರಿಸುತ್ತೇನೆ’ ಎಂದರು.
ಸ್ಪೀಕರ್ ರಾಹುಲ್ ಅವರು ಸದ್ಯ ಲಂಡನ್ ಪ್ರವಾಸದಲ್ಲಿ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.