ADVERTISEMENT

ವಿಶ್ವಗುರುವಾಗುವ ಭಾರತದ ಪ್ರಯತ್ನ ತಡೆಯಲು ಸುಳ್ಳು ಮಾಹಿತಿ ಬಿತ್ತರ: ಭಾಗವತ್

ಪಿಟಿಐ
Published 9 ಏಪ್ರಿಲ್ 2023, 16:34 IST
Last Updated 9 ಏಪ್ರಿಲ್ 2023, 16:34 IST
ಮೋಹನ್‌ ಭಾಗವತ್
ಮೋಹನ್‌ ಭಾಗವತ್   

ಮುಂಬೈ: ಭಾರತವು ವಿಶ್ವಗುರು ಪಟ್ಟವೇರುವತ್ತ ಹೆಜ್ಜೆ ಹಾಕುತ್ತಿದೆ. ಆದರೆ, ಈ ಕುರಿತು ಸುಳ್ಳು ಹಾಗೂ ತಿರುಚಿದ ಮಾಹಿತಿಯನ್ನು ಪ್ರಸಾರ ಮಾಡುವ ಮೂಲಕ ಇದಕ್ಕೆ ತಡೆ ಒಡ್ಡಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಭಾನುವಾರ ಹೇಳಿದರು.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಇಂಥ ತಪ್ಪುಕಲ್ಪನೆಗಳನ್ನು ಬಿತ್ತರಿಸುವ ಕಾರ್ಯ ಆರಂಭಗೊಂಡಿತು. ಆದರೆ, ಇಂತಹ ಕೃತ್ಯಗಳಲ್ಲಿ ತೊಡಗಿದ್ದವರಿಗೆ ಸ್ವಾಮಿ ವಿವೇಕಾನಂದ ಅವರು ತಕ್ಕ ಪ್ರತ್ಯುತ್ತರ ನೀಡಿದರು’ ಎಂದು ಹೇಳಿದರು.

‘ಮುಂದಿನ 20–30 ವರ್ಷಗಳಲ್ಲಿ ಭಾರತವು ವಿಶ್ವಗುರುವಾಗಿ ಹೊರಹೊಮ್ಮುವುದು ನಿಶ್ಚಿತ. ಈ ಗುರಿ ಸಾಧನೆ ಹಾಗೂ ಇಂಥ ಬದಲಾವಣೆಯನ್ನು ಅನಭವಿಸುವ ಸಲುವಾಗಿ ನಾವು ಎರಡು ಪೀಳಿಗೆಗಳನ್ನು ಅಣಿಗೊಳಿಸಬೇಕಿದೆ’ ಎಂದು ಭಾಗವತ್‌ ಪ್ರತಿಪಾದಿಸಿದರು.

ADVERTISEMENT

‘ಕಳೆದ ಹಲವು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಭಾರತವು ಗಮನಾರ್ಹ ಪ್ರಗತಿ ಸಾಧಿಸಿದೆ. ಆದರೆ, ಭಾರತದ ಈ ಸಾಧನೆ ಕುರಿತು ಜಾಗತಿಕ ಮಟ್ಟದಲ್ಲಿ ಸುಳ್ಳು ಮಾಹಿತಿಯನ್ನು ಹಬ್ಬಿಸುವ ಕಾರ್ಯನಡೆಯುತ್ತಿದೆ. ಇಂಥ ಪ್ರಯತ್ನಗಳಿಗೆ ಪ್ರತ್ಯುತ್ತರ ನೀಡಲು ಪೀಳಿಗೆಗಳನ್ನು ಸಜ್ಜುಗೊಳಿಸಬೇಕು ಹಾಗೂ ವಿಶ್ವದಲ್ಲಿರುವ ಒಳ್ಳೆಯ ಜನರು ಭಾರತದತ್ತ ಮುಖ ಮಾಡುವಂತೆ ಮಾಡಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.