ನವದೆಹಲಿ: ಜಾರಿ ನಿರ್ದೆಶನಾಲಯ (ಇ.ಡಿ)ದಿಂದ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸಲಾಗಿದೆ.
’ತಮ್ಮ ವಶದಲ್ಲಿರುವಾಗ ಆರೋಪಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ವಿಚಾರಣೆ ಅಪೂರ್ಣಗೊಂಡಿದ್ದು, ಇನ್ನಷ್ಟು ವಿಚಾರಣೆಗಾಗಿ ಅವಕಾಶ ನೀಡಬೇಕು’ ಎಂಬ ಇ.ಡಿ. ಪರ ವಕೀಲರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿ, ಕಾರಾಗೃಹದಲ್ಲೇ ಆರೋಪಿಯ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ಕುಮಾರ್ ಕುಹಾರ್ ಅವಕಾಶ ನೀಡಿ ಮಂಗಳವಾರ ಆದೇಶಿಸಿದರು.
ಅಕ್ಟೋಬರ್ 4 ಮತ್ತು 5ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಕೇವಲ ಮೂವರು ತನಿಖಾಧಿಕಾರಿಗಳು ಶಿವಕುಮಾರ್ ಅವರ ವಿಚಾರಣೆ ನಡೆಸಬಹುದಾಗಿದೆ. ವಿಚಾರಣೆಯ ವೇಳೆ ಆರೋಪಿ ಹಾಗೂ ತನಿಖಾಧಿಕಾರಿ
ಕಾಗದ, ಪೆನ್ ಬಳಸಲು ಅನುಮತಿ ನೀಡಲಾಗಿದೆ. 14 ದಿನಗಳ ನ್ಯಾಯಾಂಗ ಬಂಧನ ಅವಧಿ ಮಂಗಳವಾರ ಪೂರ್ಣಗೊಂಡಿದ್ದರಿಂದ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.