ಚೆನ್ನೈ: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ‘ಸಾಮಾನ್ಯ ಮನುಷ್ಯ’ರಿಗೆ ಡಿಎಂಕೆ ಹೆದರುವುದಿಲ್ಲ. ಕೋಮುವಾದಿ ಪಕ್ಷ ತಮಿಳುನಾಡಿನಲ್ಲಿ ತಳವೂರಲು ನಾವು ಬಿಡುವುದಿಲ್ಲ. ಬಿಜೆಪಿಯನ್ನು ಎದುರಿಸುವ ಪ್ರತಿರೋಧ ಸಿದ್ದಾಂತ ನಮ್ಮ ಬಳಿ ಇದೆ’ ಎಂದು ಡಿಎಂಕೆ ನಾಯಕ ಎ.ರಾಜಾ ಸೋಮವಾರ ಹೇಳಿದ್ದಾರೆ.
‘ತಮಿಳುನಾಡಿನಲ್ಲಿ 2026ಕ್ಕೆ ಎನ್ಡಿಎ ಸರ್ಕಾರ ರಚಿಸಲಿದೆ’ ಎಂದು ಅಮಿತ್ ಶಾ ಅವರು ಮಧುರೈನಲ್ಲಿ ಭಾನುವಾರ ಹೇಳಿದ್ದರು. ಈ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ರಾಜಾ, ‘ಇದು ದೆಹಲಿ, ಹರಿಯಾಣ ಮತ್ತು ಮಹಾರಾಷ್ಟ್ರವಲ್ಲ, ತಮಿಳುನಾಡು. ಕೇಸರಿ ಸಿದ್ದಾಂತಕ್ಕೆ ದ್ರಾವಿಡ ಸಿದ್ದಾಂತ ಪ್ರತಿರೋಧ ಒಡ್ಡುವವರೆಗೂ ಬಿಜೆಪಿಗೆ ಯಶಸ್ಸು ಸಿಗದು’ ಎಂದರು.
‘ಕೇಜ್ರಿವಾಲ್ ಅವರು ಭ್ರಷ್ಟಾಚಾರ ವಿರೋಧಿಸಿ ದೆಹಲಿಯಲ್ಲಿ ಅಧಿಕಾರ ಹಿಡಿದಿದ್ದರು. ಅವರ ಹಿಂದೆ ಯಾವ ನಾಯಕರೂ ಇರಲಿಲ್ಲ. ಅಮಿತ್ ಶಾ ಅಥವಾ ಮೋದಿ ಅವರಿಗೆ ನಾವು ಹೆದರುವುದಿಲ್ಲ. ಅವರೂ ನಮ್ಮಂತೆ ಸಾಮಾನ್ಯ ವ್ಯಕ್ತಿಗಳು. ಎಲ್ಲೆಡೆ ಅವರು ಗೆದ್ದರೂ ಇಲ್ಲಿ ಸಾಧ್ಯವಾಗಿಲ್ಲ. ಕಾರಣ ನಮ್ಮ ಬಳಿ ಪರ್ಯಾಯ ಸಿದ್ದಾಂತ (ದ್ರಾವಿಡ ತತ್ವಸಿದ್ದಾಂತ) ಇದೆ’ ಎಂದು ಹೇಳಿದರು.
‘ಅಮಿತ್ ಶಾ ಅವರದ್ದು ಒಡೆದು ಆಳುವ ನೀತಿ ಮತ್ತು ಅಸಹ್ಯಕರವಾದ ಹಸಿ ಸುಳ್ಳು. ಸ್ಟಾಲಿನ್ ಅವರ ಜನಪ್ರಿಯತೆ ಹೆಚ್ಚಿದೆ. ಹೀಗಾಗಿ ಬಿಜೆಪಿ ದೆಹಲಿಯಿಂದ ಅಮಿತ್ ಶಾ ಅವರನ್ನು ಕರೆಸಿದೆ’ ಎಂದು ಆರೋಪಿಸಿದರು.
ಮಧುರೈನಲ್ಲಿ ಮುರುಗ ದೇವರ ಬಗ್ಗೆ ಬಿಜೆಪಿ ಏರ್ಪಡಿಸಿರುವ ಸಂವಾದವು ರಾಜಕೀಯ ಲಾಭ ಪಡೆಯಲು ಕೋಮು ದ್ವೇಷ ಸೃಷ್ಟಿಸುವ ಪಿತೂರಿ ಎಂದು ರಾಜಾ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.