ಬಂಧನ
(ಪ್ರಾತಿನಿಧಿಕ ಚಿತ್ರ)
ಹೈದರಾಬಾದ್: ಮಾದಕ ವಸ್ತುಗಳ ಸಾಗಣೆ ಮತ್ತು ಸೇವನೆಯ ದೊಡ್ಡ ಜಾಲವೊಂದನ್ನು ಭೇದಿಸಿರುವ ಹೈದರಾಬಾದ್ ಪೊಲೀಸರು ಬೆಂಗಳೂರಿನ ನಂಟಿರುವ ಹೋಟೆಲ್ ಮಾಲೀಕ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.
ಗುಪ್ತಚರ ಮಾಹಿತಿ ಆಧರಿಸಿ ಸೈಬರಾಬಾದ್ ಮಾದಕ ವಸ್ತುಗಳ ನಿಗ್ರಹ ಠಾಣೆ ಪೊಲೀಸರು ಜುಲೈ 7ರಂದು ಕೋಂಪಲ್ಲಿ ರೆಸ್ಟೋರೆಂಟ್ ಬಳಿ ಕಾರಿನಲ್ಲಿ ತೆರಳುತ್ತಿದ್ದ 34 ವರ್ಷದ ಸೂರ್ಯ ಅಣ್ಣಾಮನೇನಿ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಎಂಬಿಎ ಪದವೀಧರನೂ ಆಗಿರುವ ಕೋಂಪಲ್ಲಿಯ ಈತ ‘ಮಲ್ನಾಡ್ ಕಿಚನ್’ ಎಂಬ ರೆಸ್ಟೋರೆಂಟ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಣ್ಣಾಮನೇನಿ ಈ ಹಿಂದೆ ಬೆಂಗಳೂರಿನಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಆನಂತರ ಹೈದರಾಬಾದ್ಗೆ ಬಂದಿದ್ದರು ಎನ್ನಲಾಗಿದೆ.
ನವದೆಹಲಿಯಿಂದ ಫಾತಿಮಾ ಎಂಬ ಹೆಸರಿನಲ್ಲಿ ಕಳಿಸಲಾಗಿದ್ದ ರಟ್ಟಿನ ಬಾಕ್ಸ್ನಲ್ಲಿದ್ದ ಮಹಿಳೆಯರ ಹೀಲ್ಡ್ ಚಪ್ಪಲಿಯ ಒಳಗೆ ಮಾದಕ ವಸ್ತು ದೊರೆತಿತ್ತು. ಶೋಧದ ವೇಳೆ 10 ಗ್ರಾಂ ಕೊಕೇನ್, 3.2 ಗ್ರಾಂ ಗಾಂಜಾ, 1.6 ಗ್ರಾಂ ಎಕ್ಸ್ಟಾಸಿ ಮಾತ್ರೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಈಗಲ್ ( ಮಾದಕ ವಸ್ತುಗಳ ವಿರುದ್ಧದ ಕಾನೂನು ಜಾರಿ ಕಾರ್ಯಪಡೆ) ತಿಳಿಸಿದೆ.
ದೆಹಲಿ, ಬೆಂಗಳೂರು ಮತ್ತು ಗೋವಾದಲ್ಲಿರುವ ನೈಜೀರಿಯಾ ಮೂಲದ ಮಾದಕ ವಸ್ತು ಪೂರೈಕೆದಾರರ ಜೊತೆ ಬಂಧಿತರಿಗೆ ನಂಟಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಗೃಹ ಬಳಕೆ ವಸ್ತುಗಳಲ್ಲಿಟ್ಟು ಕೊರಿಯರ್ ಮೂಲಕ ಮಾದಕ ವಸ್ತು ತರಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
2021ರಿಂದ 2025ರ ನಡುವೆ ಸುಮಾರು 20 ಬಾರಿ ಕೊಕೇನ್ ತರಿಸಿ ಹೈದ್ರಾಬಾದ್ನ ಪಬ್ಗಳಿಗೆ ಪೂರೈಸಿರುವುದೂ ತನಿಖೆಯಲ್ಲಿ ಗೊತ್ತಾಗಿದೆ. ಮಾದಕ ವಸ್ತುಗಳ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.