ನವದೆಹಲಿ: ಆನ್ಲೈನ್ನಲ್ಲಿ ದೇವಿ ದರ್ಶನ, ಮನೆಗೇ ಪ್ರಸಾದ ವಿತರಣೆ, ಅರ್ಚಕರು ಮತ್ತು ಅಡುಗೆಯವರಿಗೆ ಕೋವಿಡ್ ಪರೀಕ್ಷೆ... ಇದು ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿನ ನಡುವೆಯ ದುರ್ಗಾಪೂಜೆಯನ್ನು ಸುರಕ್ಷಿತವಾಗಿ ಆಚರಿಸಲು ಸಂಘಟಕರು ಕಂಡುಕೊಂಡಿರುವ ಕ್ರಮಗಳು.
ದೆಹಲಿಯಲ್ಲಿ ಬಹುತೇಕ ದುರ್ಗಾ ಸಮಿತಿಗಳು ದುರ್ಗಾಪೂಜೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿವೆ. ಕೆಲವರು ತಮ್ಮ ಸಮಿತಿಯ ಸದಸ್ಯರಿಗೆ ಮಾತ್ರ ದರ್ಶನದ ಅವಕಾಶ ಕಲ್ಪಿಸಿದ್ದಾರೆ.
ಕೋವಿಡ್ ಸೋಂಕಿನ ಕಾರಣಕ್ಕಾಗಿ ಕೆಲ ಆಯೋಜಕರು ಇಬ್ಬರು ಅರ್ಚಕರನ್ನು ನೇಮಿಸಿಕೊಂಡಿದ್ದಾರೆ. ಅರ್ಚಕರಿಗೆ ಕೋವಿಡ್ ಪರೀಕ್ಷೆ ಮಾಡಿಸಿಯೇ ಪೂಜೆಗೆ ಅನುವು ಮಾಡಲಾಗುತ್ತದೆಯಾದರೂ, ಒಂದು ವೇಳೆ ಸೋಂಕು ಕಾಣಿಸಿಕೊಂಡಲ್ಲಿ, ತಕ್ಷಣವೇ ಮತ್ತೊಬ್ಬ ಅರ್ಚಕರನ್ನು ಪೂಜೆಗೆ ನೇಮಿಸಬಹುದು ಎಂಬ ಲೆಕ್ಕಾಚಾರ ಆಯೋಜಕರದ್ದು. ಪ್ರಸಾದ ತಯಾರಿಸುವ ಅಡುಗೆಯವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.
ದೆಹಲಿಯ ಪ್ರಸಿದ್ಧ ಚಿತ್ತರಂಜನ್ ಪಾರ್ಕ್ ಕಾಳಿ ಮಂದಿರ ಸೊಸೈಟಿಯು ಪ್ರತಿವರ್ಷವೂ ದೊಡ್ಡದಾಗಿ ದುರ್ಗಾಪೂಜೆ ಆಚರಿಸುತ್ತಿತ್ತು. ಆಧರೆ, ಈ ಬಾರಿ ಕೋವಿಡ್ ಕಾರಣಕ್ಕಾಗಿ ದೇವಾಲಯಕ್ಕೆ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಿದೆ.
ಭಕ್ತರಿಗೆ ಮನೆಯಲ್ಲೇ ಆನ್ಲೈನ್ ಮೂಲಕ ದುರ್ಗಾದೇವಿಯ ದರ್ಶನ ಒದಗಿಸಲು ಡಿಟಿಎಚ್ ಸೇವೆ ಮತ್ತು ಸ್ಥಳೀಯ ಕೇಬಲ್ ಆಪರೇಟರ್ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಫೇಸ್ಬುಕ್ ಪುಟ ಮತ್ತು ಯೂಟ್ಯೂಬ್ ಚಾನೆಲ್ನಲ್ಲೂ ಅನ್ಲೈನ್ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.