ADVERTISEMENT

ಕೇರಳದ ದೇಗುಲಕ್ಕೆ ಬಂತು ಎಲೆಕ್ಟ್ರಾನಿಕ್‌ ಆನೆ!

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 20:35 IST
Last Updated 19 ಫೆಬ್ರುವರಿ 2023, 20:35 IST
ಇ–ಆನೆ
ಇ–ಆನೆ   

ತಿರುವನಂತಪುರ: ಧಾರ್ಮಿಕ ಆಚರಣೆಗಳಿಗೆ ಆನೆಗಳನ್ನು ಬಾಡಿಗೆಗೆ ಪಡೆಯುವುದು ದುಬಾರಿಯಾಗಿರುವುದರಿಂದ ಮತ್ತು ಉತ್ಸವದ ವೇಳೆ ಅವುಗಳು ಮದವೇರಿ ಜನರನ್ನು ಸಾಯಿಸುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ತ್ರಿಶ್ಶೂರ್‌ ಜಿಲ್ಲೆಯ ಇರಿಂಜಾಲಕುಡದ ಇರಿಂಜಾಡಪಿಳ್ಳಿ ಶ್ರೀಕೃಷ್ಣ ದೇವಾಲಯವು ಇ–ಆನೆಯ (ಎಲೆಕ್ಟ್ರಾನಿಕ್‌ ಆನೆ) ಮೊರೆ ಹೋಗಿದೆ.

11 ಅಡಿ ಎತ್ತರದ ಇ–ಆನೆಯನ್ನು ಲೋಹ, ರಬ್ಬರ್‌ ಶೀಟ್‌ ಮತ್ತು ಮೋಟಾರು ಬಳಸಿ ತಯಾರಿಸಲಾಗಿದೆ. ಆನೆಯ ತಲೆ, ಕಿವಿಗಳು ಮತ್ತು ಬಾಲವು ಚಲಿಸಲು ಮೋಟಾರು ಅಳವಡಿಸಲಾಗಿದೆ. ಈ ಕೃತಕ ಆನೆಯು ಸೊಂಡಿಲಿನಿಂದ ನೀರನ್ನು ಸಿಂಪಡಿಸುವ ಸಾಮರ್ಥ್ಯವನ್ನೂ ಹೊಂದಿದೆ. ಇದರ ಚಲನೆಗಾಗಿ ಕಾಲುಗಳಿಗೆ ಚಕ್ರಗಳನ್ನು ಅಳವಡಿಸಲಾಗಿದ್ದು, ಆನೆ ಮೇಲೆ ನಾಲ್ವರು ಕುಳಿತುಕೊಳ್ಳಬಹುದಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.

ಇ– ಆನೆಗೆ ಇರಿಂಜಾಡಪಿಳ್ಳಿ ರಾಮನ್‌ ಎಂದು ಹೆಸರಿಡಲಾಗಿದೆ. ಇದು ಕೇರಳದ ಜನಪ್ರಿಯ ಸಾಕಾನೆ ತೆಚಿಕೊಟ್ಟುಕಾವು ರಾಮಚಂದ್ರನ್ ಅನ್ನು ಹೋಲುತ್ತಿದ್ದು, ಜನರ ಗಮನ ಸೆಳೆಯುತ್ತಿದೆ ಎಂದಿವೆ.

ADVERTISEMENT

ಇರಿಂಜಾಡಪಿಳ್ಳಿ ಶ್ರೀಕೃಷ್ಣ ದೇವಾಲಯವು ರಾಜ್‌ಕುಮಾರ್‌ ನಂಬೂದಿರಿ ಎಂಬುವವರ ಕುಟಂಬಕ್ಕೆ ಸೇರಿದ್ದು, ರಾಜ್‌ಕುಮಾರ್‌ ಅವರು ಇ–ಆನೆಯ ಮಾಲೀಕರಾಗಿದ್ದಾರೆ.

ದೇವಸ್ಥಾನಗಳಲ್ಲಿ ನಡೆಯುವ ಆಚರಣೆಗಳಿಗೆ ಆನೆಯನ್ನು ಬಳಸಬೇಕೆಂದು ಯಾವುದೇ ತಾಂತ್ರಿಕ ಪುಸ್ತಕಗಳಲ್ಲಿ ಉಲ್ಲೇಖಿಸಿಲ್ಲ. ಇ–ಆನೆಯನ್ನು ದೇವಾಲಯದ ಆಚರಣೆಗಳಿಗೆ ಬಳಸಿಕೊಳ್ಳುತ್ತಿರುವುದು ಇದೇ ಮೊದಲು ಎಂದು ರಾಜ್‌ಕುಮಾರ್‌ ಹೇಳಿದ್ದಾರೆ.

₹5 ಲಕ್ಷಕ್ಕೆ ಇ–ಆನೆಯನ್ನು ಖರೀದಿಸಲಾಗಿದ್ದು, ಭಕ್ತರು ಇದಕ್ಕಾಗಿ ದೇಣಿಗೆ ನೀಡಿದ್ದಾರೆ. ಫೆಬ್ರುವರಿ 26ರಂದು ನಡೆಯುವ ಕಾರ್ಯಕ್ರಮದಲ್ಲಿ ಆನೆಯನ್ನು ಔಪಚಾರಿಕವಾಗಿ ದೇವಾಲಯಕ್ಕೆ ಪಡೆಯಲಾಗುವುದು ಎಂದೂ ಹೇಳಿದ್ದಾರೆ. ಸ್ಥಳೀಯ ಕುಶಲಕರ್ಮಿಗಳ ತಂಡವೊಂದು ಈ ಆನೆಯನ್ನು ತಯಾರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.