ಸಂಜಯ್ ರಾವುತ್, ಶಿವಸೇನೆ(ಯುಬಿಟಿ) ನಾಯಕ
ಮುಂಬೈ: 2019ರಲ್ಲಿ ಬಿಜೆಪಿಯು ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯುವುದನ್ನು ತಪ್ಪಿಸಿದ ಒಂದೇ ಒಂದು ಕಾರಣಕ್ಕೆ ನನ್ನನ್ನು ಜಾರಿ ನಿರ್ದೇಶನಾಲಯದ ಮೂಲಕ ಹಣ ಅಕ್ರಮ ವರ್ಗಾವಣೆ ಆರೋಪ ಹೊರಿಸಿ ಬಂಧಿಸಲಾಗಿತ್ತು ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ.
2022ರಲ್ಲಿ ಇ.ಡಿಯಿಂದ ಬಂಧಿತರಾಗಿದ್ದ ರಾವುತ್ ಜೈಲಿನಲ್ಲಿ ತಮಗಾದ ಅನುಭವಗಳ ಕುರಿತು ಬರೆದಿರುವ ‘ನರಕದಲ್ಲಿ ಸ್ವರ್ಗ’(ನರ್ಕರ್ತಲಾ ಸ್ವರ್ಗ್) ಪುಸ್ತಕದಲ್ಲಿ, ‘ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ನಾನು ‘ರಕ್ಷಾ ಕವಚ’ದಂತಿದ್ದೆ ಎನ್ನುವ ಕಾರಣಕ್ಕೆ ನನ್ನ ಮೇಲೆ ಕ್ರಮ ಜರುಗಿಸಿದರು’ ಎಂದು ಹೇಳಿದ್ದಾರೆ.
‘ಬಹುಮತದ ಸರ್ಕಾರ (170 ಶಾಸಕರ ಬಲ) ಕೆಡವಲು ಆಪರೇಷನ್ ಕಮಲದಿಂದ ಆಗುವುದಿಲ್ಲ ಎಂದು ಗೊತ್ತಾಗಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ರಾಜಕೀಯವಾಗಿ ಬಳಸಿ ಅನಿಲ್ ದೇಶಮುಖ್, ನವಾಬ್ ಮಲಿಕ್ ಮತ್ತು ನನ್ನನ್ನು ಗುರಿಯಾಗಿಸಿದರು’.
‘ಠಾಕ್ರೆ ಸರ್ಕಾರದಲ್ಲಿ ಎನ್ಸಿಪಿಯ ದೇಶಮುಖ್ ಮತ್ತು ಮಲಿಕ್ ಸಚಿವರಾಗಿದ್ದರು. ನಾವು ಮೂರು ಮಂದಿ ಅಲ್ಲದೇ ಮಹಾ ವಿಕಾಸ್ ಅಘಾಡಿಯಲ್ಲಿ ಯಾರನ್ನು ಬಂಧಿಸಬೇಕು ಎಂದು ಇ.ಡಿ.ಪಟ್ಟಿಯನ್ನೇ ತಯಾರಿಸಿತ್ತು. ಏಕನಾಥ ಶಿಂಧೆ ಸೇರಿದಂತೆ ಶಿವಸೇನೆಯ 40 ಶಾಸಕರ ಪೈಕಿ 11 ಶಾಸಕರನ್ನು ಇ.ಡಿ. ಮೂಲಕ ಬಿಗಿ ಮಾಡಲಾಯಿತು. ಅವಿಭಜಿತ ಶಿವಸೇನೆಯ ಕೆಲ ಸಂಸದರನ್ನೂ ಬಂಧಿಸಲು ಇ.ಡಿ ಮುಂದಾಗಿತ್ತು‘ ಎಂದು ಆರೋಪಿಸಿದ್ದಾರೆ.
‘ಠಾಕ್ರೆ ಸರ್ಕಾರ ಉರುಳಿದ ನಂತರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಮ್ಮ ಸರ್ಕಾರ ಉಳಿಯಬೇಕಾದರೆ ನನ್ನನ್ನು ಜೈಲಿಗೆ ಹಾಕಬೇಕು ಎಂದು ಬಯಸಿದರು’ ಎಂದು ರಾವುತ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.