ADVERTISEMENT

ಹಣ ಅಕ್ರಮ ವರ್ಗಾವಣೆ: ಮುಂಬೈ ಮಾಜಿ ಕಮೀಷನರ್ ಸಂಜಯ್ ಪಾಂಡೆ ಬಂಧನ

ಪಿಟಿಐ
Published 19 ಜುಲೈ 2022, 16:43 IST
Last Updated 19 ಜುಲೈ 2022, 16:43 IST
   

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಡಿಜಿಪಿ ಮತ್ತು ಮುಂಬೈನ ಮಾಜಿ ಪೊಲೀಸ್ ಕಮೀಷನರ್ ಸಂಜಯ್ ಪಾಂಡೆ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ರಾಷ್ಟ್ರೀಯ ಷೇರುಪೇಟೆಯ ನೌಕರರ ಫೋನ್ ಟ್ಯಾಂಪಿಂಗ್‌ಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಸಂಜಯ್ ಪಾಂಡೆ ಮತ್ತು ಎನ್‌ಎಸ್‌ಇಯ ಇಬ್ಬರು ಮಾಜಿ ಮಖ್ಯಸ್ಥರಾದ ಚಿತ್ರಾ ರಾಮಕೃಷ್ಣ ಮತ್ತು ರವಿ ನರೈನ್ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿಕೊಂಡಿತ್ತು.

ಸಿಬಿಐ, ಚಿತ್ರಾ ರಾಮಕೃಷ್ಣ ಅವರನ್ನು ಬಂಧಿಸಿದ ಕೆಲ ದಿನಗಳ ಬಳಿಕ ಸಂಜಯ್ ಪಾಂಡೆ ವಿರುದ್ಧ ಇ.ಡಿ ಕ್ರಮ ಕೈಗೊಂಡಿದೆ. ಸಿಬಿಐ ಸಹ ಸಂಜಯ್ ಪಂಡೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

ADVERTISEMENT

ಸಂಜಯ್ ಪಾಂಡೆ ಒಡೆತನದ ಐಸೆಕ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೇಡ್‌ ಸಂಸ್ಥೆಯು 2009ರಿಂದ 2017ರವರೆಗೆ ಎನ್‌ಎಸ್‌ಇ ನೌಕರರ ಫೋನ್ ಟ್ಯಾಪಿಂಗ್ ಮಾಡಿ ನರೈನ್ ಮತ್ತು ಚಿತ್ರಾ ರಾಮಕೃಷ್ಣ ಅವರಿಗೆ ಮಾಸಿಕ ವರದಿ ನೀಡುತ್ತಿತ್ತು ಎಂದು ಆರೋಪಿಸಲಾಗಿದೆ.

ಏಪ್ರಿಲ್ 2000ನೇ ಇಸವಿಯಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಪಾಂಡೆ, ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಆದರೆ, ಸರ್ಕಾರ ರಾಜೀನಾಮೆ ಅಂಗೀಕರಿಸದ ಕಾರಣ ಮತ್ತೆ ಪೊಲೀಸ್ ಹುದ್ದೆ ಮುಂದುವರಿಸಿದ್ದರು.

ತಮ್ಮ ತಾಯಿ ಮತ್ತು ಮಗನನ್ನು ಕಂಪನಿಗೆ ನಿರ್ದೇಶಕರಾಗಿ ನೇಮಕ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.