ADVERTISEMENT

ವಿಮಾನ ನಿಲ್ದಾಣದಲ್ಲೇ ಅಭಿಷೇಕ್‌ ಬ್ಯಾನರ್ಜಿ ಸಂಬಂಧಿ ತಡೆದು ಸಮನ್ಸ್‌ ನೀಡಿದ ಇ.ಡಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 11:15 IST
Last Updated 11 ಸೆಪ್ಟೆಂಬರ್ 2022, 11:15 IST
ಅಭಿಷೇಕ್‌ ಬ್ಯಾನರ್ಜಿ
ಅಭಿಷೇಕ್‌ ಬ್ಯಾನರ್ಜಿ   

ನವದೆಹಲಿ/ಕೋಲ್ಕತ್ತ:ವಿದೇಶಕ್ಕೆ ತೆರಳಲು ಸಿದ್ಧರಾಗಿದ್ದ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರ ಸಂಬಂಧಿ ಮನೇಕಾ ಗಂಭೀರ್‌ ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆದಜಾರಿ ನಿರ್ದೇಶನಾಲಯ(ಇ.ಡಿ), ಹಣಕಾಸು ಅಕ್ರಮ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಅವರಿಗೆ ಸಮನ್ಸ್‌ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮನೇಕಾ ಅವರು ಬ್ಯಾಂಕಾಕ್‌ಗೆ ತೆರಳಲು ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಅವರಿಗೆ ಇ.ಡಿ ಲುಕ್‌ಔಟ್‌ ನೋಟಿಸ್‌ ನೀಡಿದ್ದ ಆಧಾರದ ಮೇಲೆ ವಲಸೆ ಅಧಿಕಾರಿಗಳು ಅವರನ್ನು ತಡೆದರು. ಬಳಿಕ ಅವರೊಂದಿಗೆ ಮಾತನಾಡಿದ ಇ.ಡಿ ಅಧಿಕಾರಿಗಳು ಅವರಿಗೆ ಸಮನ್ಸ್‌ ನೀಡಿ ಸೆಪ್ಟೆಂಬರ್ 12ರಂದು ಬೆಳಗ್ಗೆ 11 ಗಂಟೆಗೆ ಕೋಲ್ಕತ್ತದ ಸಾಲ್ಟ್‌ಲೇಕ್‌ ಪ್ರದೇಶದಲ್ಲಿರುವ ಇ.ಡಿ ಕಚೇರಿಗೆ ಹಾಜರಾಗುವಂತೆ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ನಡೆದಿತ್ತು ಎನ್ನಲಾದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ಮೊಕದ್ದಮೆಯಲ್ಲಿ ಮನೇಕಾ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ADVERTISEMENT

ಇದೇ ಪ್ರಕರಣದಲ್ಲಿ ಮನೇಕಾ ಅವರು ಸಿಬಿಐನಿಂದ ವಿಚರಣೆಗೊಳಪಟ್ಟಿದ್ದರು. ಕೋಲ್ಕತ್ತದ ಇ.ಡಿ ಕಚೇರಿಯಲ್ಲಿ ಅವರ ವಿಚಾರಣೆ ನಡೆಸಬೇಕು ಎಂದು ಕಲ್ಕತ್ತಾ ಹೈಕೋರ್ಟ್‌ ಇ.ಡಿಗೆ ಆಗಸ್ಟ್‌ನಲ್ಲಿ ನಿರ್ದೇಶನ ನೀಡಿತ್ತು. ಜೊತೆಗೆ, ಅವರ ವಿರುದ್ಧ ಯಾವುದೇ ಒತ್ತಾಯದ ಕ್ರಮಗಳನ್ನು ಕೈಗೊಳ್ಳದಂತೆ ಕೂಡಾ ಹೇಳಿತ್ತು.

ಅಭಿಷೇಕ್‌ ಬ್ಯಾನರ್ಜಿ ಕೂಡಾ ಇದೇ ಮೊಕದ್ದಮೆಯಲ್ಲಿ ಇ.ಡಿ ವಿಚಾರಣೆ ಎದುರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.