ಚೆನ್ನೈ: ಬ್ಯಾಂಕ್ಗೆ ₹200 ಕೋಟಿ ಮೊತ್ತದ ವಂಚನೆ ಮತ್ತು ಬೇನಾಮಿ ಸಂಪತ್ತು ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪರಮಾಪ್ತೆ ಶಶಿಕಲಾ ಸೇರಿದಂತೆ ಹಲವು ಆಪ್ತರ ಮನೆ ಹಾಗೂ ಇತರೆ ಕಡೆಗಳಲ್ಲಿ ಇ.ಡಿ (ಜಾರಿ ನಿರ್ದೇಶನಾಲಯ) ಗುರುವಾರ ದಾಳಿ ಮಾಡಿದೆ.
ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಶಶಿಕಲಾ ಅವರ ಬೇನಾಮಿ ಎನ್ನಲಾದ ಮಾರ್ಗ್ ಸಮೂಹದ ಜಿ.ಆರ್.ಕೆ ರೆಡ್ಡಿ ಅವರಿಗೆ ಸಂಬಂಧಿಸಿದ 10 ಸ್ಥಳಗಳಲ್ಲಿ ಪರಿಶೀಲನೆ ನಡೆದಿದೆ. ಕೆನರಾ ಬ್ಯಾಂಕ್ಗೆ ₹200 ಕೋಟಿ ವಂಚಿಸಿದ ಆರೋಪ ಇದಾಗಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ತನಿಖೆ ನಡೆಯುತ್ತಿದೆ. ಈಗಾಗಲೇ ಸಿಬಿಐ ಕೂಡಾ ಎಫ್ಐಆರ್ ದಾಖಲು ಮಾಡಿದೆ. ಸಿಬಿಐ ಎಫ್ಐಆರ್ನಲ್ಲಿ ಶಶಿಕಲಾ ಹೆಸರು ಇಲ್ಲ.
ಮೂಲಗಳ ಪ್ರಕಾರ ಆದಾಯ ತೆರಿಗೆ ಇಲಾಖೆ ಕೆಲ ದಿನಗಳ ಹಿಂದೆ ಆದೇಶವೊಂದನ್ನು ಹೊರಡಿಸಿ ಜಿ.ಆರ್.ಕೆ.ರೆಡ್ಡಿ ಅವರು ಶಶಿಕಲಾ ಅವರ ಬೇನಾಮಿದಾರ ಎಂದು ಘೋಷಿಸಿತ್ತು. ಮಾರ್ಗ್ ಸಮೂಹದಲ್ಲಿ ಶಶಿಕಲಾ ಅವರ ಕೆಲ ಬೇನಾಮಿ ಆಸ್ತಿಗಳಿವೆ ಎಂಬ ಮಾಹಿತಿಯನ್ನೂ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.