ಭುವನೇಶ್ವರ: ಒಡಿಶಾದ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರ ಬೆಂಗಾವಲು ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆಗಳನ್ನು ಎಸೆದಿದ್ದಾರೆ.
ಶಾಲಾ ಶಿಕ್ಷಕಿ ಮಮಿತಾ ಮೆಹರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಜೊತೆ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿರುವ ಗೃಹ ಸಚಿವ ದಿವ್ಯ ಶಂಕರ್ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿಮೊಟ್ಟೆ ದಾಳಿ ನಡೆಸಲಾಗಿದೆ.
ಪುರಿ ನಗರದ ಸರ್ಕಾರಿ ಆಸ್ಪತ್ರೆಯ ಬಳಿ ಮೊಟ್ಟೆ ದಾಳಿ ನಡೆದಿದೆ. ಸಿಎಂ ನವೀನ್ ಪಾಟ್ನಾಯಕ್ ಅವರು ಜಗನ್ನಾಥ ದೇವಸ್ಥಾನದ ಹೆರಿಟೇಜ್ ಕಾರಿಡಾರ್ ಯೋಜನೆಗೆ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭುವನೇಶ್ವರಕ್ಕೆ ವಾಪಸ್ ಆಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಭಾರತೀಯ ಜನತಾ ಯುವ ಮೋರ್ಚಾ(ಬಿಜೆವೈಎಂ) ಬೆಂಬಲಿಗರು ಇದ್ದಕ್ಕಿದ್ದಂತೆ ಆಗಮಿಸಿ, ಬಿಗಿಭದ್ರತೆಯಲ್ಲಿ ಸಂಚರಿಸುತ್ತಿದ್ದಸಿಎಂ ಅವರನ್ನು ಗುರಿಯಾಗಿಸಿ ಬೆಂಗಾವಲು ವಾಹನಗಳ ಮೇಲೆ ಮೊಟ್ಟೆ ಎಸೆದಿದ್ದಾರೆ.
'ಪುರಿ ಜಿಲ್ಲೆಯಲ್ಲಿ ಮೊಟ್ಟೆಗಳನ್ನು ಎಸೆದಿದ್ದು ಹಾಗೂ ಕಪ್ಪು ಬಾವುಟ ತೋರಿಸಿದ್ದು ನಮ್ಮ ಕಾರ್ಯಕರ್ತರು. ಮುಖ್ಯಮಂತ್ರಿ ಹೋದ ಕಡೆಗಳಲ್ಲೆಲ್ಲ ನಾವು ಹೋಗುತ್ತೇವೆ. ಉಗ್ರವಾಗಿ ಪ್ರತಿಭಟಿಸುತ್ತೇವೆ. ಕಳಂಕಿತ ಮಂತ್ರಿಗಳನ್ನು ಸುಂಪುಟದಿಂದ ಕೈಬಿಡುವ ತನಕ ಹೋರಾಟ ಮುಂದುವರಿಸುತ್ತೇವೆ' ಎಂದು ಬಿಜೆವೈಎಂ ರಾಜ್ಯಾಧ್ಯಕ್ಷ ಈರಾಶಿಶ್ ಆಚಾರ್ಯ ಪ್ರತಿಕ್ರಿಯಿಸಿದ್ದಾರೆ.
ಬುಧವಾರ ಬೆಳಗ್ಗೆ ಮಾಲತಿಪಾಟಪುರದ ಸಮೀಪ ಸಚಿವ ವಿಕ್ರಮ್ ಕೇಸರಿ ಅರುಖಾ ಅವರ ವಾಹನದ ಮೇಲೆ ಮೊಟ್ಟೆ ದಾಳಿ ನಡೆದಿದೆ. ವಿಕ್ರಮ್ ಕೇಸರಿ ಅವರು ಜಗನ್ನಾಥ ದೇವಸ್ಥಾನದ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.