ADVERTISEMENT

ಮುಂಬೈನಲ್ಲೊಂದು ಅಮಾನವೀಯ ಘಟನೆ; ಐದು ರೂಪಾಯಿಗಾಗಿ ವೃದ್ಧನ ಕೊಲೆ!

ಪಿಟಿಐ
Published 26 ಫೆಬ್ರುವರಿ 2020, 19:45 IST
Last Updated 26 ಫೆಬ್ರುವರಿ 2020, 19:45 IST

ಮುಂಬೈ : ಕೇವಲ ಐದು ರೂಪಾಯಿಗಾಗಿ 68 ವರ್ಷದ ವೃದ್ಧ ಆಟೋರಿಕ್ಷಾ ಚಾಲಕನನ್ನು ಹತ್ಯೆ ಮಾಡಿದ ಘಟನೆ ಮುಂಬೈನ ಪಶ್ಚಿಮ ಉಪನಗರ ಬೊರಿವಾಲಿಯಾದಲ್ಲಿ ನಡೆದಿದೆ.

ಆಟೋ ಚಾಲಕ ರಾಮ್‌ದುಲಾರ್ ಸರ್ಜೂ ಯಾದವ್ ಬೊರಿವಾಲಿಯಾದ ಸಿಎನ್‌ಜಿ ಗ್ಯಾಸ್ ಸ್ಟೇಷನ್‌ನಲ್ಲಿ ಮಂಗಳವಾರ ಸಂಜೆ , ತನ್ನ ರಿಕ್ಷಾಕ್ಕೆ ಗ್ಯಾಸ್ ತುಂಬಿಸಿಕೊಳ್ಳಲು ಹೋಗಿದ್ದಾರೆ. ಅದೇ ವೇಳೆ ತಮ್ಮ ಮಗನಿಗೆ ಕರೆ ಮಾಡಿ ಗ್ಯಾಸ್ ಸ್ಟೇಷನ್ ಬಳಿ ಬರುವಂತೆ ತಿಳಿಸಿದ್ದಾರೆ.

₹ 205 ಗ್ಯಾಸ್ ಭರ್ತಿ ಮಾಡಿದ ಬಳಿಕ, ಗ್ಯಾಸ್ ಸ್ಟೇಷನ್‌ನ ಕೆಲಸಗಾರ ಸಂತೋಷ್ ಯಾದವ್ ಎಂಬಾತನಿಗೆ ₹ 500ರ ನೋಟು ನೀಡಿದ್ದಾರೆ. ಸಂತೋಷ್ ₹ 295 ವಾಪಸ್ ಹಣ ನೀಡುವ ಬದಲು ₹ 290 ಮಾತ್ರ ನೀಡಿದ್ದಾನೆ. ಇದಕ್ಕೆ ಚಾಲಕ ರಾಮ್‌ದುಲಾರ್ ಆಕ್ಷೇಪ ವ್ಯಕ್ತಪಡಿಸಿ, ₹ 5 ವಾಪಸ್ ನೀಡುವಂತೆ ಕೇಳಿದ್ದಾರೆ.

ADVERTISEMENT

‘ಇದರಿಂದ ಕೆರಳಿದ ಸಂತೋಷ್, ಅಲ್ಲಿದ್ದ ಇತರ ಉದ್ಯೋಗಿಗಳ ಜತೆ ಸೇರಿ ವೃದ್ಧ ಆಟೋ ಚಾಲಕಕನ್ನು ಥಳಿಸಿದ್ದಾನೆ. ಚಾಲಕ ಪ್ರಜ್ಞೆ ತಪ್ಪಿದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಗ್ಯಾಸ್ ಸ್ಟೇಷನ್‌ನ ಐವರು ಕೆಲಸಗಾರರನ್ನು ಬಂಧಿಸಲಾಗಿದೆ ಎಂದು ಕಸ್ತೂರ್ ಬಾ ಮಾರ್ಗ ಪೊಲೀಸ್‌ ಸ್ಟೇಷನ್‌ನ ಹಿರಿಯ ಪೊಲೀಸ್ ಅಧಿಕಾರಿ ನಾಮ್‌ದೇವ್ ಶಿಂಧೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.