ನವದೆಹಲಿ (ಪಿಟಿಐ): ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಫೆಬ್ರುವರಿ 3ರಂದು ವಿದ್ಯುತ್ ಕ್ಷೇತ್ರದ ಎಂಜಿನಿಯರ್ಗಳು ದೇಶದಾದ್ಯಂತ ಪ್ರತಿಭಟನೆಗೆ ಇಳಿಯಲು ನಿರ್ಧರಿಸಿದ್ದಾರೆ.
ಅಂದು ಎಲ್ಲ ಎಂಜಿನಿಯರ್ಗಳು ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅಖಿಲ ಭಾರತ ವಿದ್ಯುತ್ ಎಂಜಿನಿಯರ್ಗಳ ಒಕ್ಕೂಟದ (ಎಐಪಿಇಎಫ್) ವಕ್ತಾರ ವಿ.ಕೆ. ಗುಪ್ತಾ ತಿಳಿಸಿದ್ದಾರೆ.
‘ವಿದ್ಯುತ್ ವಿತರಣೆಯ ಸಂಪೂರ್ಣ ಖಾಸಗೀಕರಣಕ್ಕಾಗಿ ವಿದ್ಯುತ್ (ತಿದ್ದುಪಡಿ) ಮಸೂದೆ 2020 ಜಾರಿಗೊಳಿಸುವುದು ಮತ್ತು ಸ್ಟ್ಯಾಂಡರ್ಡ್ ಬಿಡ್ಡಿಂಗ್ ಡಾಕ್ಯುಮೆಂಟ್ ಮೂಲಕ ವಿದ್ಯುತ್ ವಲಯದ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿರುವುದು ಸರಿಯಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಶೈಲೇಂದ್ರ ದುಬೆ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಸಾರ್ವಜನಿಕ ಏಕಸ್ವಾಮ್ಯವನ್ನು ಖಾಸಗಿ ಏಕಸ್ವಾಮ್ಯಕ್ಕೆ ಪರಿವರ್ತಿಸುವುದಕ್ಕೆ ವಿದ್ಯುತ್ ಎಂಜಿನಿಯರ್ಗಳ ವಿರೋಧವಿದೆ. ಖಾಸಗೀಕರಣದ ನೀತಿಯು ದೇಶಾದ್ಯಂತ ಸಾರ್ವಜನಿಕ ವಲಯವನ್ನು ನಿಧಾನವಾಗಿ ನಾಶಪಡಿಸುತ್ತದೆ ಮತ್ತು ಕೆಲವು ಕಾರ್ಪೊರೇಟ್ಗಳಿಗೆ ಭಾರಿ ಪ್ರಯೋಜನವಾಗುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.