ADVERTISEMENT

ಎಐಎಡಿಎಂಕೆ: ಸಂಧಾನದ ಬೇಡಿಕೆ ತಿರಸ್ಕರಿಸಿದ ಪಳನಿಸ್ವಾಮಿ

ಏಕಸದಸ್ಯ ಪೀಠದ ತೀರ್ಪಿನ ವಿರುದ್ಧ ಮದ್ರಾಸ್‌ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 12:36 IST
Last Updated 18 ಆಗಸ್ಟ್ 2022, 12:36 IST
ಪನ್ನೀರಸೆಲ್ವಂ (ಎಡ) ಮತ್ತು ಪಳನಿಸ್ವಾಮಿ 
ಪನ್ನೀರಸೆಲ್ವಂ (ಎಡ) ಮತ್ತು ಪಳನಿಸ್ವಾಮಿ    

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪಕ್ಷದ ಜಂಟಿ ಸಂಯೋಜಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ತಮ್ಮ ಪ್ರಮುಖ ಪ್ರತಿಸ್ಪರ್ಧಿ ಒ.ಪನ್ನೀರಸೆಲ್ವಂ ಅವರ ಸಂಧಾನದ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.

ಪಕ್ಷದ ನಾಯಕತ್ವದ ವಿಚಾರವಾಗಿ ಮದ್ರಾಸ್‌ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿರುವ ತೀರ್ಪಿಗೆ ತಡೆ ನೀಡುವಂತೆ ಪಳನಿಸ್ವಾಮಿ ಬಣದವರು ಗುರುವಾರ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಜಿ.ಜಯಚಂದ್ರನ್‌ ಅವರಿದ್ದ ಏಕಸದಸ್ಯ ಪೀಠವುಎಐಎಡಿಎಂಕೆಯಅತ್ಯಂತ ಪ್ರಭಾವಿ ಸಮಿತಿಯಾದ ‘ಜನರಲ್‌ ಕೌನ್ಸಿಲ್‌’ (ಜಿ.ಸಿ), ಪಳನಿಸ್ವಾಮಿ ಅವರನ್ನು ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದನ್ನು ಬುಧವಾರ ಅಮಾನ್ಯಗೊಳಿಸಿತ್ತು. ಜೂನ್‌ 23ರಲ್ಲಿ ಇದ್ದಂತೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಉಭಯ ಬಣದವರಿಗೆ ಸೂಚಿಸಿತ್ತು.

ADVERTISEMENT

ಪಕ್ಷದ ಸಂಯೋಜಕರಾಗಿರುವ ಪನ್ನೀರಸೆಲ್ವಂ ಅವರು ಪಳನಿಸ್ವಾಮಿ ಜೊತೆ ಸಂಧಾನಕ್ಕೆ ಸಿದ್ಧ ಎಂಬ ಧಾಟಿಯಲ್ಲಿ ಮಾತನಾಡಿದ್ದರು. ‘ಭಿನ್ನಮತಗಳನ್ನು ಬದಿಗೊತ್ತಿ ನಾವೆಲ್ಲಾ ಪಕ್ಷ ಬಲಪಡಿಸುತ್ತೇವೆ. ಈಗ ಉದ್ಭವವಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಪಕ್ಷಕ್ಕೆ ಸೇರ್ಪಡೆಯಾಗುವಂತೆ ವಿ.ಕೆ.ಶಶಿಕಲಾ ಮತ್ತು ಟಿ.ಟಿ.ವಿ.ದಿನಕರನ್‌ ಅವರಿಗೆ ಆಹ್ವಾನ ನೀಡುತ್ತೇವೆ’ ಎಂದು ಹೇಳಿದ್ದರು.

‘ಪನ್ನೀರಸೆಲ್ವಂ ಅವರು ಹಿಂದೆಯೂ ರಾಜಿ ಸಂಧಾನದ ಮಾತುಗಳನ್ನಾಡಿದ್ದರು. ಅವರಿಗೆ ತಮ್ಮ ರಾಜಕೀಯ ಶಕ್ತಿ ಕುಂದುತ್ತಿರುವುದರ ಅರಿವಾಗಿದೆ. ಹೀಗಾಗಿ ನಮ್ಮ ಎದುರು ಇಂತಹ ಬೇಡಿಕೆಗಳನ್ನು ಇಡುತ್ತಿದ್ದಾರೆ. ಅವರ ಜೊತೆ ಮಾತನಾಡುವುದಕ್ಕೆ ಏನೂ ಉಳಿದಿಲ್ಲ. ಅವರು ಪಕ್ಷಕ್ಕಾಗಿ ಯಾವತ್ತೂ ದುಡಿದಿಲ್ಲ. ತಮ್ಮ ಮಗನನ್ನು ಕೇಂದ್ರ ಸಚಿವನನ್ನಾಗಿ ಮಾಡಬೇಕೆಂಬುದಷ್ಟೇ ಅವರ ಉದ್ದೇಶ. ಅವರು ಜಿ.ಸಿ ಸಭೆಗೂ ಮುನ್ನ ತಮ್ಮ ಬೆಂಬಲಿಗರ ಮೂಲಕ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದರು’ ಎಂದು ಪಳನಿಸ್ವಾಮಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.