ADVERTISEMENT

ಸಾವಿರಾರು ಪಿಐಎಲ್ ದಾಖಲಿಸಿದರೂ ಜನಸೇವೆ ಮುಂದುವರಿಸುವೆ: ಗೌತಮ್ ಗಂಭೀರ್

ಪಿಟಿಐ
Published 26 ಮೇ 2021, 11:26 IST
Last Updated 26 ಮೇ 2021, 11:26 IST
ಗೌತಮ್ ಗಂಭೀರ್
ಗೌತಮ್ ಗಂಭೀರ್   

ನವದೆಹಲಿ: ಕೋವಿಡ್‌–19 ಔಷಧಿ ವಿತರಣೆಗಳ ಕುರಿತು ದೆಹಲಿ ಹೈಕೋರ್ಟ್‌ನಿಂದ ತೀವ್ರ ಟೀಕೆ ಎದುರಿಸುತ್ತಿರುವ ಬಿಜೆಪಿಯ ಸಂಸದ ಗೌತಮ್ ಗಂಭೀರ್ ಅವರು, ತಮ್ಮ ವಿರುದ್ಧ ಸಾವಿರಾರು ಸಾರ್ವಜನಿಕ ಹಿತಾಸಕ್ತಿ (ಪಿಐಎಲ್‌) ಅರ್ಜಿಗಳನ್ನು ಸಲ್ಲಿಸಿದರೂ, ಜನರ ಜೀವ ಉಳಿಸುವ ಕಾರ್ಯವನ್ನು ಮುಂದುವರಿಸುವುದಾಗಿ ಬುಧವಾರ ಹೇಳಿದ್ದಾರೆ.

ಔಷಧಿಗಳ ಕೊರತೆ ಎದುರಾಗಿರುವ ಸಂದರ್ಭದಲ್ಲೇ ರಾಜಕಾರಣಿಗಳು ಬೃಹತ್ ಪ್ರಮಾಣದಲ್ಲಿ ಕೋವಿಡ್‌–19 ಔಷಧಿಗಳನ್ನು ಖರೀದಿಸುತ್ತಿರುವ ವಿಷಯದ ಬಗ್ಗೆ ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್ ಸೋಮವಾರ ಔಷಧ ನಿಯಂತ್ರಕರಿಗೆ ನಿರ್ದೇಶನ ನೀಡಿತ್ತು.

‘ಜನರ ಸೇವೆಗೆ ಅಗತ್ಯವಾಗಿದ್ದರಿಂದ ಔಷಧಗಳನ್ನು ಖರೀದಿಸಿ ನೀಡಿದ್ದೇನೆ. ಇದಕ್ಕಾಗಿ ನಾನು ಯಾವುದೇ ಶಿಕ್ಷೆಯನ್ನಾಗಲೀ ಎದುರಿಸಲು ಸಿದ್ಧವಿದ್ದೇನೆ’ ಎಂದು ಪೂರ್ವ ದೆಹಲಿ ಕ್ಷೇತ್ರದ ಬಿಜೆಪಿ ಸಂಸದ ಗೌತಮ್ ಅವರು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ನ್ಯಾಯಾಲಯದ ತೀರ್ಪನ್ನು ನಾನು ಒಪ್ಪಿಕೊಳ್ಳುವೆ. ಆದರೆ, ಇಂಥ ಘಟನೆಗಳು ಎದುರಾದಾಗ ನಾನು ಇದನ್ನೇ ಮಾಡುವೆ’ ಎಂದೂ ಅವರು ಪ್ರತಿಪಾದಿಸಿದರು.

‘ದೆಹಲಿಯ ಮೆಡಿಕಲ್ ಶಾಪ್‌ಗಳಲ್ಲಿ ಔಷಧಗಳು ಏಕೆ ಲಭ್ಯವಿಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಆಮ್ಲಜನಕದ ಕೊರತೆ ಏಕಿದೆ ಎಂಬುದನ್ನು ಪ್ರಶ್ನಿಸಬೇಕಿದೆ. ಜನರ ಸೇವೆ ಮಾಡುವ ಸಲುವಾಗಿ ನಾನು ರಾಜಕೀಯಕ್ಕೆ ಸೇರಿಕೊಂಡೆ. ಹಾಗಾಗಿ, ಈಗ ಜನಸೇವೆಯನ್ನೇ ನಾನು ಮಾಡುತ್ತಿರುವೆ’ ಎಂದೂ ಗೌತಮ್ ಹೇಳಿದ್ದಾರೆ.

ಗೌತಮ್ ಗಂಭೀರ್ ಅವರು ತಮ್ಮ ಕ್ಷೇತ್ರದಲ್ಲಿ ಅಗತ್ಯವಿರುವವರಿಗೆ ಆಮ್ಲಜನಕ ಸಿಲಿಂಡರ್, ಕಾನ್ಸನ್‌ಟ್ರೇಟ್‌ಗಳು ಮತ್ತು ಕೋವಿಡ್ ಔಷಧಿ ಫ್ಯಾಬಿಫ್ಲೂಗಳನ್ನು ವಿತರಣೆ ಮಾಡುತ್ತಿದ್ದಾರೆ.

ನ್ಯಾಯಾಲಯದ ಆದೇಶದ ಮೇರೆಗೆ ದೆಹಲಿ ಪೊಲೀಸರು ಈ ವಿಷಯದಲ್ಲಿ ಅವರ ಹೇಳಿಕೆಯನ್ನು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.