ನವದೆಹಲಿ (ಪಿಟಿಐ): ಅಸ್ಸಾಂನಲ್ಲಿ ಬಿಜೆಪಿ ಅಭ್ಯರ್ಥಿಯ ಹೆಂಡತಿಯ ಕಾರಿನಲ್ಲಿ ಮತಯಂತ್ರ ಸಿಕ್ಕಿದ ಪ್ರಕರಣದಲ್ಲಿ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಶುಕ್ರವಾರ ಪ್ರಶ್ನಿಸಿದೆ. ಆಯೋಗವು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮತ್ತು ಇಂತಹ ಕೃತ್ಯಗಳಲ್ಲಿ ಶಾಮೀಲಾಗುವುದನ್ನು ಮುಂದುವರಿಸಿದರೆ ಪ್ರಜಾಪ್ರಭುತ್ವಕ್ಕೆ ಮಾರಣಾಂತಿಕ ಹೊಡೆತ ಬೀಳುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಬಿಜೆಪಿ ಅಭ್ಯರ್ಥಿಯ ಹೆಂಡತಿಯ ಕಾರಿನಲ್ಲಿ ಮತಯಂತ್ರ ಪತ್ತೆಯಾದ ವಿಡಿಯೊವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಆಯೋಗದ ಕಾರು ಹಾಳಾಗಿದೆ. ಬಿಜೆಪಿಯ ಉದ್ದೇಶ ಕೆಟ್ಟದ್ದು ಮತ್ತು ಪ್ರಜಾಪ್ರಭುತ್ವದ ಸ್ಥಿತಿ ಶೋಚನೀಯ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಅಸ್ಸಾಂನಲ್ಲಿ ಭಾರಿ ಸೋಲು ಕಾದಿದೆ ಎಂಬುದು ಬಿಜೆಪಿಗೆ ಅರಿವಾಗಿದೆ. ಹಾಗಾಗಿಯೇ ಆ ಪಕ್ಷವು ಹೇಳಲಾಗದಷ್ಟು ದಿಗಿಲುಗೊಂಡಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
‘ಹತಾಶೆಯ ಕೊನೆಯ ಕ್ರಮವೇ ಮತಯಂತ್ರ ಕಳ್ಳತನ. ಮತಯಂತ್ರವು ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಅವರ ಕಾರಿನಲ್ಲಿ ಹೇಗೆ ಬಂತು? ಅಸ್ಸಾಂನ ದಿಫು ಬಳಿಯ ಹಾತಿಪುರ ಮತಗಟ್ಟೆಯ ಬಳಿ ಐಷಾರಾಮಿ ಕಾರಿನ ಡಿಕ್ಕಿಯಲ್ಲಿ ಮತಯಂತ್ರ ಇರಿಸಿದ್ದು ಏಕೆ? ಆಯೋಗವು ಉತ್ತರಿಸುತ್ತದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.
ಭದ್ರತಾ ಸಿಬ್ಬಂದಿ ಇಲ್ಲದೆಯೇ ಮತಯಂತ್ರಗಳನ್ನು ಒಯ್ದದ್ದು ಏಕೆ? ಕಾಲೈಗಾಂವ್ ಮತಗಟ್ಟೆಯಿಂದ ಮತಯಂತ್ರ ಮಾಯವಾಗಿತ್ತು ಎಂದು ಮತದಾರರು ದೂರಿದ್ದು ನಿಜವೇ? ಯಾವ ತನಿಖೆ ನಡೆದಿದೆ? ಯಾವ ಕ್ರಮ ಕೈಗೊಳ್ಳಲಾಗಿದೆ? ಮತಯಂತ್ರಗಳನ್ನು ಇರಿಸಿದ ದಿಬ್ರುಗಡದ ಕೊಠಡಿಯಲ್ಲಿ ಅನುಮಾನಾಸ್ಪದ ಅಧಿಕಾರಿಯೊಬ್ಬರು ಇದ್ದದ್ದು ಹೌದೇ? ಈ ಪ್ರಕರಣದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ... ಹೀಗೆ ಹಲವು ಪ್ರಶ್ನೆಗಳನ್ನು ಅವರು ಕೇಳಿದ್ದಾರೆ.
139 ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಈ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಕೇಳಿದ್ದಾರೆ.
ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಚುನಾವಣೆಗಳು ಮತ್ತು ಮತಯಂತ್ರ ಸುರಕ್ಷತೆಯ ಬಗ್ಗೆ ಆಯೋಗವು ಜನರ ವಿಶ್ವಾಸವನ್ನು ಮರುಸ್ಥಾಪಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.