ನವದೆಹಲಿ:ವರ್ಚುವಲ್ ವಿಚಾರಣೆಯನ್ನು ನ್ಯಾಯಾಂಗದ ಕಾಯಂ ವ್ಯವಸ್ಥೆಯನ್ನಾಗಿ ಮಾಡಬೇಕು ಎಂದು ಕೇಂದ್ರೀಯ ಮಾಹಿತಿ ಆಯೋಗದ ಮಾಜಿ ಆಯುಕ್ತ ಶೈಲೇಶ್ ಗಾಂಧಿ ಹೇಳಿದ್ದಾರೆ.
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ‘ಸುಪ್ರೀಂಕೋರ್ಟ್ ಇ–ಕಮಿಟಿ’ಗೆ ಸಲ್ಲಿಸಿರುವ ಮನವಿಪತ್ರದಲ್ಲಿ ಅವರು ಈ ಸಲಹೆ ಮುಂದಿಟ್ಟಿದ್ದಾರೆ.
‘2005ರಲ್ಲಿ ಅಸ್ತಿತ್ವಕ್ಕೆ ಬಂದಿರುವ ‘ಸುಪ್ರೀಂಕೋರ್ಟ್ ಇ–ಕಮಿಟಿ’, ಎಲ್ಲ ಹಂತಗಳ ಕೋರ್ಟ್ಗಳಲ್ಲಿ ಐಟಿ ಆಧಾರಿತ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಹೇಳಿತ್ತು. ಆದರೆ, ಈ ನಿಟ್ಟಿನಲ್ಲಿ ನಿರೀಕ್ಷಿತ ಸಾಧನೆ ಆಗಿಲ್ಲ’ ಎಂದು ಅವರು ಹೇಳಿದ್ದಾರೆ.
‘ದೇಶದಲ್ಲಿ 20,000 ಕೋರ್ಟ್ಗಳಿವೆ ಎಂಬ ಅಂದಾಜಿದೆ. ಪ್ರತಿ ಕೋರ್ಟ್ನಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಐಟಿ ಆಧಾರಿತ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದರೆ, ಕೋವಿಡ್ ಪಿಡುಗಿನ ಅವಧಿಯಲ್ಲಿ ಆನ್ಲೈನ್ ಮೂಲಕ ವಿಚಾರಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ಬಹುತೇಕ ಕೋರ್ಟ್ಗಳು ವಿಫಲವಾಗಿವೆ’ ಎಂದೂ ಅವರು ಹೇಳಿದ್ದಾರೆ.
ಆಯೋಗದ ಆಯುಕ್ತರಾಗಿದ್ದಾಗ ಗಾಂಧಿ ಅವರು ಆಯೋಗದಲ್ಲಿ ಕಾಗದ ರಹಿತ ವ್ಯವಸ್ಥೆಯನ್ನು ಜಾರಿಗೊಳಿಸಲು ಶ್ರಮಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.