ಅಜಂಗಡ, ಉತ್ತರಪ್ರದೇಶ: ಮಾಜಿ ಪ್ರೇಯಸಿಯ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿ ಬಾವಿಗೆ ಎಸೆದಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
‘ಪ್ರಿನ್ಸ್ ಯಾದವ್ ಬಂಧಿತ. ಮಹಿಳೆಯ ರುಂಡದ ಪತ್ತೆಗಾಗಿ ಆರೋಪಿಯನ್ನು ಭಾನುವಾರ ಘಟನಾ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಆತ ಸ್ಥಳದಲ್ಲಿ ಬಚ್ಚಿಟ್ಟಿದ್ದ ನಾಡ ಪಿಸ್ತೂಲ್ ನಿಂದ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಹೇಳಿದ್ದಾರೆ.
‘ಪಶ್ಚಿಮಿ ಗ್ರಾಮದ ಹೊರ ಭಾಗದಲ್ಲಿರುವ ಬಾವಿಯಲ್ಲಿ ಇದೇ 15ರಂದು ಮೃತದೇಹ ಪತ್ತೆಯಾಗಿತ್ತು. ಮೃತಳನ್ನು ಆರಾಧನಾ ಎಂದು ಗುರುತಿಸಲಾಗಿದೆ. ಆರೋಪಿ, ಆಕೆ ಯೊಂದಿಗೆ ಸಂಬಂಧ ಹೊಂದಿದ್ದ. ಆಕೆ ಬೇರೊಬ್ಬರನ್ನು ವಿವಾಹವಾಗಿದ್ದರಿಂದ ಕೆರಳಿದ್ದ ಆತ, ತನ್ನ ಪೋಷಕರು ಹಾಗೂ ಸೋದರ ಸಂಬಂಧಿಯ ನೆರವಿನೊಂದಿಗೆ ಹತ್ಯೆ ಮಾಡಿದ್ದ’ ಎಂದಿದ್ದಾರೆ.
‘ಇದೇ 9ರಂದು ಆರೋಪಿ ತನ್ನ ಬೈಕಿನಲ್ಲಿ ಮಹಿಳೆಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ. ದೇವಸ್ಥಾನ ತಲುಪಿದ ಬಳಿಕ ಸಂಬಂಧಿ ಸರ್ವೇಶ್ ಜೊತೆಗೂಡಿ ಮಹಿಳೆಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದಿದ್ದ. ಅಲ್ಲಿ ಆಕೆಯ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿ ಪಾಲಿಥಿನ್ ಚೀಲದಲ್ಲಿ ತುಂಬಿದ್ದರು. ಅದನ್ನು ಬಾವಿಗೆ ಎಸೆದಿದ್ದರು. ರುಂಡವನ್ನು ಕೆರೆಯೊಂದರಲ್ಲಿ ಬಿಸಾಡಿದ್ದರು’ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.