ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನಿ ಮಹಿಳೆ
ಪಿಟಿಐ ಚಿತ್ರ
ಚಂಡೀಗಢ: ಸಾರ್ಕ್ ವೀಸಾ ಅಡಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಪ್ರಜೆಗಳು ದೇಶ ಬಿಟ್ಟು ತೆರಳಲು ವಿಧಿಸಿದ್ದ ಗಡುವು ಅಂತ್ಯಗೊಂಡಿದ್ದು, ನೂರಾರು ಮಂದಿ ಪಂಜಾಬ್ನ ಅಟ್ಟಾರಿ ವಾಘಾ ಗಡಿ ಮೂಲಕ ತೆರಳಿದ್ದಾರೆ. ಈ ವೇಳೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಸಂಬಂಧಿಕರು ಕಣ್ಣೀರ ವಿದಾಯ ಹೇಳಿದ್ದಾರೆ.
‘ನನ್ನ ತಾಯಿ ಭಾರತೀಯಳು ಮತ್ತು ಅವರನ್ನು ಪಾಕಿಸ್ತಾನಕ್ಕೆ ನಮ್ಮೊಂದಿಗೆ ಬರಲು ಅನುಮತಿ ನೀಡಿಲ್ಲ’ ಎಂದು ಸರಿತಾ ಎಂಬ ಯುವತಿ ಹೇಳಿದ್ದಾರೆ. ಏಪ್ರಿಲ್ 29ರಂದು ನಡೆಯಲಿದ್ದ ಸಂಬಂಧಿಕರ ವಿವಾಹ ಸಮಾರಂಭಕ್ಕಾಗಿ ನಮ್ಮ ಕುಟುಂಬ ಭಾರತಕ್ಕೆ ಬಂದಿತ್ತು. ನಾವು ಒಂಬತ್ತು ವರ್ಷಗಳ ನಂತರ ಭಾರತಕ್ಕೆ ಬಂದಿದ್ದೆವು ಎಂದು ಸರಿತಾ ಹೇಳಿದ್ದಾರೆ.
ಸರಿತಾ, ಅವರ ಸಹೋದರ ಮತ್ತು ಅವರ ತಂದೆ ಪಾಕಿಸ್ತಾನಿಯರು. ಆದರೆ, ಅವರ ತಾಯಿ ಭಾರತೀಯರು.
ನನ್ನ ತಾಯಿ ನಮ್ಮ ಜೊತೆಯಲ್ಲಿ ಬರಲು ಅನುಮತಿ ನೀಡುವುದಿಲ್ಲ ಎಂದು ಗಡಿಯಲ್ಲಿರುವ ಅಧಿಕಾರಿಗಳು ಹೇಳುತ್ತಿದ್ದಾರೆ. 1991ರಲ್ಲಿ ನನ್ನ ಪೋಷಕರು ವಿವಾಹವಾಗಿದ್ದರು. ನನ್ನ ತಾಯಿ ಭಾರತೀಯಳಾಗಿದ್ದು, ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ಪಾಕಿಸ್ತಾನಕ್ಕೆ ತೆರಳಲು ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಎಂಬುದಾಗಿ ಸರಿತಾ ಅಳುತ್ತಾ ಹೇಳಿದ್ದಾರೆ.
ಸಾರ್ಕ್ ವೀಸಾದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗಿದ್ದ ನಿರ್ಗಮನದ ಗಡುವು ಏಪ್ರಿಲ್ 26ರಂದು ಕೊನೆಗೊಂಡಿದೆ. ಆದರೆ, ವೈದ್ಯಕೀಯ ವೀಸಾದಲ್ಲಿರುವವರನ್ನು ಹೊರತುಪಡಿಸಿ ಉಳಿದವರನ್ನು ದೇಶ ಬಿಟ್ಟು ತೆರಳಲು ಸೂಚಿಸಲಾಗಿದೆ.
26 ಜನರು ಸಾವಿಗೀಡಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕೇಂದ್ರ ಸರ್ಕಾರ ಈ ಆದೇಶ ಮಾಡಿತ್ತು.
ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗಿರುವ ಮೆಡಿಕಲ್ ವೀಸಾ ಏಪ್ರಿಲ್ 29ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.
ಅಮೃತಸರ ಜಿಲ್ಲೆಯ ಅತ್ತಾರಿ ಗಡಿಯಲ್ಲಿ, ಪಾಕಿಸ್ತಾನಿ ಪ್ರಜೆಗಳು ತಮ್ಮ ದೇಶಕ್ಕೆ ತೆರಳಲು ಧಾವಿಸಿದಾಗ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ತಮ್ಮ ಪಾಕಿಸ್ತಾನಿ ಸಂಬಂಧಿಕರನ್ನು ಬೀಳ್ಕೊಡಲು ಅತ್ತಾರಿ ಗಡಿಗೆ ಅನೇಕ ಭಾರತೀಯರು ಬಂದಿದ್ದರು.
ಭಾರತದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಬಂದಿದ್ದೆವು ಎಂದು ಬಹುತೇಕರು ಪಿಟಿಐಗೆ ತಿಳಿಸಿದ್ದಾರೆ. ಕೆಲವರು ಮದುವೆಗಳಿಗೆ ಹಾಜರಾಗಲು ಬಂದಿದ್ದರು. ಆದರೆ, ಈಗ ಭಾಗವಹಿಸದೆ ಮನೆಗೆ ಹಿಂದಿರುಗಬೇಕಾಗಿದೆ.
ತಮ್ಮ ಮಾವ, ಚಿಕ್ಕಮ್ಮ ಮತ್ತು ಮಕ್ಕಳು 36 ವರ್ಷಗಳ ನಂತರ ತಮ್ಮನ್ನು ಭೇಟಿ ಮಾಡಲು ಬಂದಿದ್ದರು. ಆದರೆ, ಗಡುವುಗಿಂತ ಮುಂಚಿತವಾಗಿಯೇ ಹಿಂದಿರುಗಬೇಕಾಯಿತು ಎಂದು ಜೈಸಲ್ಮೇರ್ನ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.