
ಕಾರ್ಖಾನೆಯಲ್ಲಿ ಸ್ಫೋಟ
ಹೈದರಾಬಾದ್: ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿರುವ ಸ್ಫೋಟಕ ವಸ್ತು ತಯಾರಿಕೆಯ ಕಾರ್ಖಾನೆಯಲ್ಲಿ ಶನಿವಾರ ಸ್ಫೋಟ ಸಂಭವಿಸಿ ಒಬ್ಬ ವ್ಯಕ್ತಿ ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ.
ಪೆದ್ದ ಕಂದುಕುರ್ನಲ್ಲಿರುವ ಪ್ರೀಮಿಯರ್ ಎಕ್ಸ್ಪ್ಲೋಸಿವ್ಸ್ ಲಿಮಿಟೆಡ್ (ಪಿಇಎಲ್)ನಲ್ಲಿ ಈ ಸ್ಫೋಟ ಸಂಭವಿಸಿದೆ. ಕೈಗಾರಿಕಾ ಉದ್ದೇಶಕ್ಕೆ ಬಳಸುವ ಸ್ಫೋಟಕಗಳನ್ನು ಮತ್ತು ಡಿಟೊನೆಟರ್ಗಳನ್ನು ಪಿಇಎಲ್ನಲ್ಲಿ ತಯಾರಿಸಲಾಗುತ್ತಿತ್ತು.
ಕಾರ್ಖಾನೆಯಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಸಿದ ತಕ್ಷಣ ಕಾರ್ಮಿಕರು ಹೊರಗೆ ಓಡಿಬಂದಿದ್ದಾರೆ. ಆದರೆ, ಎಂಟು ಮಂದಿಗೆ ಗಂಭೀರ ಗಾಯಗಳಾಗಿ, ಇದರಲ್ಲಿ ಬಚನಾಪೇಟೆಯ ಎಂ. ಕನಕಯ್ಯ ಎಂಬುವವರು ಮೃತಪಟ್ಟಿದ್ದಾರೆ.
‘ಕಾರ್ಖಾನೆಯ ಆವರಣದಲ್ಲಿರುವ ಕೊಠಡಿಯೊಂದರಲ್ಲಿ ಇಬ್ಬರು ಕಾರ್ಮಿಕರು ಇತರ ರಾಸಾಯನಿಕಗಳೊಂದಿಗೆ ಮೆಗ್ನೀಷಿಯಂ ಮಿಶ್ರಣ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ’ ಎಂದು ಭೋಂಗಿರ್ ಡಿಸಿಪಿ ಎಂ.ರಾಜೇಶ್ ಚಂದ್ರ ಹೇಳಿದ್ದಾರೆ.
‘ಸ್ಫೋಟವು ಕಾರ್ಖಾನೆಯ ಇತರ ಭಾಗಗಳಿಗೆ ಹರಡದಂತೆ ತಡೆಯಲಾಗಿದೆ. ಅಪಾಯಕಾರಿ ವಸ್ತುಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸ್ಫೋಟಕ್ಕೆ ಕಾರಣವಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.