ನವದೆಹಲಿ/ಚೆನ್ನೈ : ತೀವ್ರಗೊಂಡಿರುವ ‘ಫನಿ’ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಬಿರುಸಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಭಾನುವಾರ ಮಧ್ಯಾಹ್ನದ ವೇಳೆ ಶ್ರೀಲಂಕಾದ ತ್ರಿಂಕೊಮಲಾಲಿಯಲ್ಲಿ ತೀವ್ರಗೊಂಡಿದ್ದ ‘ಫನಿ’ ಚಂಡಮಾರುತವು, ಚೆನ್ನೈ ಮತ್ತು ಆಂಧ್ರಪ್ರದೇಶ ಮಚಿಲಿಪಟ್ಟಣದವರೆಗೂ ವ್ಯಾಪಿಸಿತ್ತು ಎಂದು ಅದು ತಿಳಿಸಿದೆ.
ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈ ಮೊದಲು ತಮಿಳುನಾಡಿನ ಉತ್ತರ ಭಾಗದಲ್ಲಿ ಭಾರೀ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಕೇರಳದಲ್ಲೂ ಸೋಮವಾರ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ.
ಮೇ 2ರಂದು ಆಂಧ್ರಪ್ರದೇಶದ ಉತ್ತರ ಕರಾವಳಿ ಮತ್ತು ಒಡಿಶಾದ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಅಲ್ಪಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮೇ 3ರಂದು ಒಡಿಶಾದ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ತಮಿಳುನಾಡು ಮತ್ತು ಪುದುಚೇರಿ ಕರಾವಳಿ ಪ್ರದೇಶದಲ್ಲಿ ಪ್ರತಿ ಗಂಟೆಗೆ 50 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸಬಹುದು. ಕೇರಳದ ಕರಾವಳಿ ಭಾಗದಲ್ಲಿ ಏಪ್ರಿಲ್ 28ರಿಂದ ಬಿರುಗಾಳಿ ಬೀಸಲಿದೆ. ಏಪ್ರಿಲ್ 29ರಿಂದ ಮೇ 1ರವರೆಗೆ ಪುದುಚೇರಿ, ತಮಿಳುನಾಡು ಮತ್ತು ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಪ್ರದೇಶದಲ್ಲಿನ ಮೀನುಗಾರರು ಸಮುದ್ರಕ್ಕೆ ತೆರಳಬಾರದು. ಆಳವಾದ ಸಮುದ್ರಕ್ಕೆ ತೆರಳಿರುವವರು ತಕ್ಷಣವೇ ಹಿಂತಿರುಗಬೇಕು ಎಂದು ಸಲಹೆ ನೀಡಿದೆ.
ಆದರೆ, ತಮಿಳುನಾಡಿನಲ್ಲಿ ಚಂಡಮಾರುತದ ತೀವ್ರತೆ ತಗ್ಗಿದೆ. ಇಲ್ಲಿನ ಕರಾವಳಿ ಪ್ರದೇಶವನ್ನು ಫನಿ ಪ್ರವೇಶಿಸುವ ಸಾಧ್ಯತೆ ಕಡಿಮೆ ಎಂದು ಚೆನ್ನೈನಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.