ADVERTISEMENT

ಬಿಜೆಪಿ ಆಡಳಿತದಲ್ಲಿನ ರೈತರ ಸ್ಥಿತಿ ಸರ್ಕಾರದ ಸುಳ್ಳನ್ನು ತೋರಿಸುತ್ತಿದೆ: ಅಖಿಲೇಶ್

ಪಿಟಿಐ
Published 3 ನವೆಂಬರ್ 2021, 7:26 IST
Last Updated 3 ನವೆಂಬರ್ 2021, 7:26 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಲಖನೌ: ಉತ್ತರ ಪ್ರದೇಶದ ಬಾಗ್‌ಪತ್‌ ಜಿಲ್ಲೆಯಲ್ಲಿ ಸಾಲಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ‘ಹೃದಯವಿದ್ರಾವಕ‘ ಎಂದು ಬಣ್ಣಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿರುವ ರೈತರ ಇಂಥ ಸ್ಥಿತಿಯು ಸರ್ಕಾರದ ಎಲ್ಲ ಸುಳ್ಳುಗಳನ್ನು ಬಹಿರಂಗಪಡಿಸುತ್ತಿದೆ ಎಂದು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಬಿಹಾರಿಪುರ ಹಳ್ಳಿಯ ಚೌಧರಿ ಅನಿಲ್‌ ಕುಮಾರ್‌(45) ಎಂಬುವವರು ಸಾಲಬಾಧೆ ತಾಳಲಾರದೇ ಮಂಗಳವಾರ ಹೊಲವೊಂದರಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮತ್ತೊಂದು ಪ್ರತ್ಯೇಕ ಟ್ವೀಟ್‌ನಲ್ಲಿ ಅಖಿಲೇಶ್ ಯಾದವ್ ಅವರು, ‘ಲಖಿಂಪುರ ಕಿಸಾನ್ ಸ್ಮೃತಿ ದಿನ‘ವನ್ನು ಆಚರಿಸುವಂತೆ ಉತ್ತರ ಪ್ರದೇಶದ ನಾಗರಿಕರು, ರೈತರ ಹಿತೈಷಿಗಳು, ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷಗಳ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ರೈತರ ನೆನಪಿಗಾಗಿ ‘ಕಿಸಾನ್ ಸ್ಮೃತಿ ದೀಪ‘ವನ್ನು(ಮಣ್ಣಿನ ದೀಪವನ್ನು) ಬೆಳಗಿಸುವ ಮೂಲಕ ಲಖಿಂಪುರದಲ್ಲಿ ಸಾವನ್ನಪ್ಪಿದ ರೈತರಿಗೆ ಗೌರವ ಸಲ್ಲಿಸುವಂತೆ ಮನವಿ ಮಾಡಿದ್ದರೆ.

ADVERTISEMENT

ಅಕ್ಟೋಬರ್ 3 ಲಖಿಂಪುರ ಖೇರಿ ಹಿಂಸಾಚಾರದಲ್ಲಿ ‘ಬಿಜೆಪಿಯ ಕ್ರೌರ್ಯ‘ದ ಬಗ್ಗೆ ಜನರಿಗೆ ನೆನಪಿಸಲು ಪ್ರತಿ ತಿಂಗಳ 3ನೇ ದಿನವನ್ನು ‘ಲಖಿಂಪುರ ಕಿಸಾನ್ ಸ್ಮೃತಿ ದಿವಸ‘ವನ್ನಾಗಿ ಆಚರಿಸುವಂತೆ ಸಮಾಜವಾದಿ ಪಕ್ಷವು ಮಂಗಳವಾರ ತನ್ನ ಎಲ್ಲಾ ಕಾರ್ಯಕರ್ತರು ಮತ್ತು ಮಿತ್ರರನ್ನು ಕೇಳಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.