ADVERTISEMENT

ರೈತರ ಬೇಡಿಕೆಗಳು ಒಪ್ಪುವಂಥದ್ದು, ನಾವು ಬೆಂಬಲಿಸುತ್ತೇವೆ: ಅರವಿಂದ ಕೇಜ್ರಿವಾಲ್

ಏಜೆನ್ಸೀಸ್
Published 7 ಡಿಸೆಂಬರ್ 2020, 7:21 IST
Last Updated 7 ಡಿಸೆಂಬರ್ 2020, 7:21 IST
ಸಿಂಘು ಗಡಿಗೆ ಭೇಟಿ ನೀಡಿದ ಕೇಜ್ರಿವಾಲ್ –ಎಎನ್‌ಐ ಚಿತ್ರ
ಸಿಂಘು ಗಡಿಗೆ ಭೇಟಿ ನೀಡಿದ ಕೇಜ್ರಿವಾಲ್ –ಎಎನ್‌ಐ ಚಿತ್ರ   

ನವದೆಹಲಿ: ರೈತರ ಸಮಸ್ಯೆಗಳು ಮತ್ತು ಅವರಿಟ್ಟಿರುವ ಬೇಡಿಕೆ ಒಪ್ಪುವಂಥದ್ದು. ನಾವು ಅದನ್ನು ಬೆಂಬಲಿಸುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

‘ನನ್ನ ಪಕ್ಷ ಮತ್ತು ನಾನು ಆರಂಭದಿಂದಲೂ ರೈತರ ಪರ ನಿಂತಿದ್ದೇವೆ. ಅವರ ಪ್ರತಿಭಟನೆಯ ಆರಂಭದಲ್ಲಿ, 9 ಸ್ಟೇಡಿಯಂಗಳನ್ನು ಜೈಲುಗಳನ್ನಾಗಿ ಪರಿವರ್ತಿಸುವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದರು. ನನ್ನ ಮೇಲೆ ಒತ್ತಡವಿದ್ದರೂ ನಾನದಕ್ಕೆ ಅನುಮತಿ ನೀಡಿಲ್ಲ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿ–ಹರಿಯಾಣದ ಸಿಂಘು ಗಡಿಗೆ ಭೇಟಿ ನೀಡಿದ ಅವರು ‘ಗುರು ತೇಗ್ ಬಹಾದುರ್’ ಅವರ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡಿದ ಅವರು, ಅವರಿಗೆ ಒದಗಿಸಲಾಗಿರುವ ವ್ಯವಸ್ಥೆಯ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ.

‘ನಮ್ಮ ಪಕ್ಷದ ಶಾಸಕರು, ನಾಯಕರು ಸೇವಕರಾಗಿ ರೈತರ ಸೇವೆ ಮಾಡುತ್ತಿದ್ದಾರೆ. ನಾನಿಲ್ಲಿಗೆ ಮುಖ್ಯಮಂತ್ರಿಯಾಗಿ ಬಂದಿಲ್ಲ. ಸೇವಕನಾಗಿ ಬಂದಿದ್ದೇನೆ. ರೈತರು ಇಂದು ಸಂಕಷ್ಟದಲ್ಲಿದ್ದು, ನಾವು ಅವರ ಜತೆ ನಿಲ್ಲಬೇಕು. ಡಿಸೆಂಬರ್ 8ರ ಬಂದ್‌ಗೆ ಎಎಪಿ ಬೆಂಬಲ ನೀಡಿದೆ. ಪಕ್ಷದ ಕಾರ್ಯಕರ್ತರು ದೇಶದಾದ್ಯಂತ ಬಂದ್‌ ಆಚರಿಸಲಿದ್ದಾರೆ’ ಎಂದೂ ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.