ನವದೆಹಲಿ: ಅಕ್ಟೋಬರ್ 2ರ ಮಧ್ಯರಾತ್ರಿ ದೆಹಲಿಯ ಕಿಸಾನ್ ಘಾಟ್ಗೆ ತಲುಪಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರು ಪ್ರತಿಭಟನೆಯನ್ನು ಕೈಬಿಟ್ಟು ತಮ್ಮ ಊರುಗಳಿಗೆ ಮರಳಿದ್ದಾರೆ.
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ 10 ದಿನಗಳ ಕಿಸಾನ್ ಕ್ರಾಂತಿ ಪಾದಯಾತ್ರೆ ಕೈಗೊಂಡು ದೆಹಲಿಗೆ ಪ್ರವೇಶಿಸಲು ಯತ್ನಿಸಿದ ರೈತ ಹೋರಾಟಗಾರರನ್ನು ಪೊಲೀಸರು ಬಲಪ್ರಯೋಗಿಸಿ ಉತ್ತರಪ್ರದೇಶ ಗಡಿಯಲ್ಲಿಯೇ ರೈತರನ್ನು ತಡೆದಿದ್ದರು.ಆದಾದನಂತರ ರೈತರು ರಾತ್ರಿ 2 ಗಂಟೆಗೆ ಕಿಸಾನ್ ಘಾಟ್ ತಲುಪಿದ್ದರು.
ರೈತರ ಸಾಲಮನ್ನಾ, ತೈಲ ಬೆಲೆ ಇಳಿಕೆ ಮಾಡುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಭಾರತೀಯ ಕಿಸಾನ್ ಒಕ್ಕೂಟ(ಬಿಕೆಯು) ‘ಕಿಸಾನ್ ಕ್ರಾಂತಿ ಯಾತ್ರಾ’ಕ್ಕೆ ಕರೆ ನೀಡಿತ್ತು.ರೈತ ಸಂಘಟನೆಯ ಮಾಜಿ ಮುಖಂಡ ಮಹೇಂದ್ರ ಸಿಂಗ್ ಟಿಕಾಯತ್ ಅವರ ಪುತ್ರ ಬಿಕೆಯುನ ಅಧ್ಯಕ್ಷ ರಾಕೇಶ್ ಟಿಕಾಯತ್ ಈ ಪ್ರತಿಭಟನೆಗೆ ನೇತೃತ್ವ ವಹಿಸಿದ್ದರು.
ಕಿಸಾನ್ ಕ್ರಾಂತಿ ಯಾತ್ರೆಯಲ್ಲಿ ಭಾಗವಹಿಸಿದ್ದ ಸಾವಿರಾರು ರೈತರನ್ನು ಕರೆತಂದ 400 ಟ್ರ್ಯಾಕ್ಟರ್ಗಳು ಮಂಗಳವಾರ ತಡರಾತ್ರಿ ಕಿಸಾನ್ ಘಾಟ್ ತಲುಪಿದ್ದವು.ಹಲವುರೀತಿಯ ಕಷ್ಟಗಳನ್ನು ಎದುರಿಸಿ ರೈತರು ಇಲ್ಲಿಗೆ ತಲುಪಿದ್ದಾರೆ. ಕಳೆದ 12 ದಿನಗಳಿಂದ ನಾವು ಯಾತ್ರೆ ನಡೆಸುತ್ತಿದ್ದೇವೆ.ರೈತರು ಸುಸ್ತಾಗಿದ್ದಾರೆ, ನಾವು ನಮ್ಮ ಬೇಡಿಕೆಗೆ ಒತ್ತಾಯಿಸುವುದನ್ನು ಮುಂದುವರಿಸುತ್ತೇವೆ.ಆದರೆ ಸದ್ಯ ಈ ಯಾತ್ರೆಯನ್ನು ಮುಗಿಸುತ್ತಿದ್ದೇವೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ತಮ್ಮ ಉದ್ದೇಶ ಪೂರೈಸಲು ವಿಫಲವಾಗಿದೆ.ನಮ್ಮ ರೈತರ ಹೋರಾಟ ಗೆದ್ದಿದೆ.ಯಾತ್ರೆಯನ್ನು ಈಗ ಕೈ ಬಿಡುತ್ತಿದ್ದೇವೆ, ನಮ್ಮ ಬೇಡಿಕೆಯ ಬಗ್ಗೆ ಸರ್ಕಾರ 6 ದಿನಗಳೊಳಗೆ ಅಧಿಕೃತ ಘೋಷಣೆ ಹೊರಡಿಸಲಿ ಎಂದು ಮಾಧ್ಯಮವರ ಜತೆ ಮಾತನಾಡಿದ ನರೇಶ್ ಟಿಕಾಯತ್ ಹೇಳಿದ್ದಾರೆ.
ಇದನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.