ನವದೆಹಲಿ: ‘ಪುಲ್ವಾಮಾದಲ್ಲಿ ನಡೆದದ್ದು ಒಂದುದುರ್ಘಟನೆ’ ಎಂದು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವು ಕೇಂದ್ರ ಸಚಿವರಿಂದ ಟೀಕೆ ಎದುರಿಸಿದ್ದಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇದೀಗ ‘ದೆಹಲಿಯಲ್ಲಿದ್ದೇ ನಾನು ಟ್ವೀಟ್ ಮಾಡಿದ್ದೆ. ನನ್ನ ವಿರುದ್ಧ ಪ್ರಕರಣ ದಾಖಲಿಸಿ’ ಎಂದು ಪ್ರಧಾನಿಗೆ ಸವಾಲು ಹಾಕಿದ್ದಾರೆ.
‘ಯಾವ ಕಾರಣಕ್ಕೆ ನೀವು ನನ್ನ ಓರ್ವ ದೇಶದ್ರೋಹಿ, ಪಾಕಿಸ್ತಾನದ ಬೆಂಬಲಿಗ ಎಂದೆಲ್ಲಾ ಬಿಂಬಿಸಿದಿರೋ, ನಾನು ಆ ಟ್ವೀಟ್ ಮಾಡಿದ್ದು ದೆಹಲಿಯಿಂದ. ದೆಹಲಿಯ ಪೊಲೀಸರು ಕೇಂದ್ರ ಸರ್ಕಾರದ ಅಧೀನಕ್ಕೇ ಬರುತ್ತಾರಲ್ಲವೇ? ನಿನಗೆ ಧೈರ್ಯವಿದ್ದರೆ ನನ್ನ ವಿರುದ್ಧ ಪ್ರಕರಣ ದಾಖಲಿಸಿ’ ಎಂದು ಅವರು ಸವಾಲು ಹಾಕಿದರು.
ದಿಗ್ವಿಜಯ ಸಿಂಗ್ ಅವರು ಮಂಗಳವಾರ ಮಾಡಿದ್ದ ಟ್ವೀಟ್ನಲ್ಲಿ‘ಪುಲ್ವಾಮಾ ದುರ್ಘಟನೆಯ ನಂತರಭಾರತೀಯವಾಯುಪಡೆ ನಡೆಸಿದ ದಾಳಿಯಿಂದ ಪಾಕಿಸ್ತಾನದಲ್ಲಿರುವ ಉಗ್ರಗಾಮಿ ಶಿಬಿರಗಳು ನಾಶವಾಗಿರುವ ಬಗ್ಗೆ ವಿದೇಶಿ ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿವೆ. ಇದು ಸರ್ಕಾರ ನೀಡುತ್ತಿರುವವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ’ ಎಂದು ಹೇಳಿದ್ದರು.
ಹಲವು ಸಚಿವರು ಮತ್ತು ಬಿಜೆಪಿ ಬೆಂಬಲಿಗರುನೇರವಾಗಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದಿಗ್ವಿಜಯ ಸಿಂಗ್ ಬುಧವಾರ ಮುಂಜಾನೆ ಮತ್ತೊಮ್ಮೆ ಟ್ವೀಟ್ ಮಾಡಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ‘40 ಸಿಆರ್ಪಿಎಫ್ ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ದಾಳಿ ಭಯೋತ್ಪಾದಕರ ಕೃತ್ಯ ಎನ್ನುವುದರ ಬಗ್ಗೆ ಅನುಮಾನಪಡಲು ಏನಿದೆ? ನನ್ನ ವಿರುದ್ಧ ಮುಗಿಬೀಳುತ್ತಿರುವ ಬಿಜೆಪಿ ನಾಯಕರು ನಾನು ಕೇಳುತ್ತಿರುವ ಪ್ರಾಥಮಿಕ ಪ್ರಶ್ನೆಗಳಿಂದ ನುಣುಚಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.
‘ದಿಗ್ವಿಜಯ ಸಿಂಗ್ ಅವರ ಹೇಳಿಕೆಗಳು ಅವರ ಪಕ್ಷದ ಮನಃಸ್ಥಿತಿಯನ್ನು ತೋರಿಸುತ್ತದೆ. ದಶಕಗಳ ಕಾಲ ದೇಶವನ್ನು ಆಳಿದ ಪಕ್ಷದ ನಾಯಕರೊಬ್ಬರು ಇಂದು ನಮ್ಮ ಸಶಸ್ತ್ರಪಡೆಗಳ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದೆ. ಮಧ್ಯಪ್ರದೇಶದ ಓರ್ವ ಪ್ರಮುಖ ನಾಯಕ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಒಂದು ದುರ್ಘಟನೆ ಎಂದಿದ್ದಾರೆ. ಇದು ಅವರ ಮನಃಸ್ಥಿತಿ’ ಎಂದು ಮೋದಿ ಮಧ್ಯಪ್ರದೇಶದ ಧಾರ್ ಪಟ್ಟಣದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಲೇವಡಿ ಮಾಡಿದ್ದರು.
ಭಯೋತ್ಪಾದಕರ ದಾಳಿಯನ್ನು ದುರ್ಘಟನೆ ಎನ್ನುತ್ತಿದ್ದೀರಿ. ಇದು ದೇಶದ ರಾಜಕೀಯ ಚರ್ಚೆಯ ವಿಚಾರವಾಗಬಾರದು. ರಾಜೀವ್ ಗಾಂಧಿ ಹತ್ಯೆಯನ್ನು ನೀವು ದುರ್ಘಟನೆ ಎನ್ನುತ್ತೀರಾ? ಇಂಥ ಕ್ಷುಲ್ಲಕ ಹೇಳಿಕೆಗಳನ್ನು ನೀಡುವ ಮೂಲಕ ದೇಶದ ಜನರು ಮತ್ತು ಸಶಸ್ತ್ರಪಡೆಗಳ ಸ್ಥೈರ್ಯ ಕುಗ್ಗಿಸಬೇಡಿ’ ಎಂದುಕೇಂದ್ರ ಸಚಿವ ವಿ.ಕೆ.ಸಿಂಗ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.