ADVERTISEMENT

ನ್ಯಾ. ಬೇಡಿ ಸಮಿತಿ ವರದಿ ಬಹಿರಂಗಕ್ಕೆ ‘ಸುಪ್ರೀಂ’ ಆದೇಶ

ಗುಜರಾತ್ ನಕಲಿ ಎನ್‌ಕೌಂಟರ್‌ ಪ್ರಕರಣ

ಪಿಟಿಐ
Published 9 ಜನವರಿ 2019, 20:01 IST
Last Updated 9 ಜನವರಿ 2019, 20:01 IST

ನವದೆಹಲಿ: ಗುಜರಾತ್‌ನಲ್ಲಿ 2002ರಿಂದ 2006ರವರೆಗೆ ನಡೆದಿರುವ 24 ನಕಲಿ ಎನ್‌ಕೌಂಟರ್ ಪ್ರಕರಣಗಳ ಕುರಿತು ನ್ಯಾಯಮೂರ್ತಿ ಎಚ್.ಎಸ್. ಬೇಡಿ ಸಮಿತಿ ನೀಡಿದ್ದ ಅಂತಿಮ ವರದಿಯ ಪ್ರತಿಗಳನ್ನು ಸಂಬಂಧಪಟ್ಟ ಅರ್ಜಿದಾರರಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಆದೇಶ ನೀಡಿದೆ.

ಅಂತಿಮ ವರದಿಯ ಪ್ರತಿಯನ್ನು ಅರ್ಜಿದಾರರಿಗೆ ನೀಡಬಾರದು ಎಂದು ಗುಜರಾತ್ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದನ್ಯಾಯಮೂರ್ತಿರಂಜನ್ ಗೊಗೊಯಿ ನೇತೃತ್ವದ ಪೀಠ,ನ್ಯಾ.ಬೇಡಿ ಸಮಿತಿ ನೀಡಿರುವ ಅಂತಿಮ ವರದಿಯನ್ನು ಪರಿಗಣಿಸುವ ಅಥವಾ ತಿರಸ್ಕರಿಸುವ ಕುರಿತು ನಂತರ ನಿರ್ಣಯಿಸಲಾಗುತ್ತದೆ ಎಂದು ಹೇಳಿದೆ.

‘ಎನ್‌ಕೌಂಟರ್‌ಗಳ ಕುರಿತು ಸ್ವತಂತ್ರ ಸಂಸ್ಥೆ ಅಥವಾ ಸಿಬಿಐಮೂಲಕ ತನಿಖೆ ನಡೆಸಲು ನಿರ್ದೇಶನ ನೀಡಬೇಕು. ಆಗ ಮಾತ್ರ ಸತ್ಯ ಬಹಿರಂಗವಾಗುತ್ತದೆ’ ಎಂದು ಹಿರಿಯ ಪತ್ರಕರ್ತ ಬಿ.ಜಿ. ವರ್ಗೀಸ್ ಹಾಗೂ ಸಾಹಿತಿ ಜಾವೇದ್ ಅಖ್ತರ್ 2007ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ವರ್ಗೀಸ್ 2014ರಲ್ಲಿ ಮೃತಪಟ್ಟಿದ್ದಾರೆ.

ADVERTISEMENT

ಪ್ರಕರಣಗಳ ತನಿಖೆಗೆ ಸಮಿತಿ ರಚಿಸಿದ್ದ ಸುಪ್ರೀಂ ಕೋರ್ಟ್, ನ್ಯಾ. ಬೇಡಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿತ್ತು.

ವರ್ಗೀಸ್ ಹಾಗೂ ಅಖ್ತರ್ ಸಲ್ಲಿಸಿದ್ದಅರ್ಜಿ ವಿಚಾರಣೆ ನಡೆಸಿದನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಎಸ್.ಕೆ. ಕೌಲ್‌ ಅವರನ್ನೂ ಒಳಗೊಂಡ ನ್ಯಾಯಪೀಠ, ‘ವರದಿ ಪ್ರತಿಯನ್ನು ಅಖ್ತರ್ ಹಾಗೂ ವರ್ಗೀಸ್ ಅವರ ವಕೀಲರಿಗೆ ನೀಡುವುದರಿಂದ, ವರದಿಯಲ್ಲಿ ಉಲ್ಲೇಖವಾಗಿರುವ ವ್ಯಕ್ತಿಗಳ ಕುರಿತು ಪೂರ್ವಗ್ರಹ ಉಂಟು ಮಾಡುವ ಸಾಧ್ಯತೆ ಇದೆ. ಆದ್ದರಿಂದ ಅವರಿಗೆ ಪ್ರತಿ ನೀಡಬಾರದು’ ಎನ್ನುವ ಗುಜರಾತ್ ಸರ್ಕಾರದ ವಾದವನ್ನು ಒಪ್ಪಿಕೊಳ್ಳಲಿಲ್ಲ.

ಬೇಡಿ ಸಮಿತಿ ನೀಡಿರುವ ವರದಿಗೆ ಪ್ರತಿಕ್ರಿಯಿಸಲು ಗುಜರಾತ್ ಸರ್ಕಾರ, ಅಖ್ತರ್ ಹಾಗೂ ವರ್ಗೀಸ್ ಅವರ ವಕೀಲರಿಗೆ ನ್ಯಾಯಪೀಠ ನಾಲ್ಕು ವಾರ ಕಾಲಾವಕಾಶ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.