ಕೂಚ್ಬಿಹಾರ್: ಕೇಂದ್ರೀಯ ಮೀಸಲುಪಡೆಗಳ ವಿರುದ್ಧ ಘೇರಾವ್ ನಡೆಸಲು ಮತದಾರರನ್ನು ಪ್ರಚೋದಿಸಿದ್ದಾರೆ ಎಂಬ ಆರೋಪದ ಮೇಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಗುರುವಾರ ಎಫ್ಐಆರ್ ದಾಖಲಿಸಲಾಗಿದೆ.
ಏ.10ರಂದು ನಡೆದ ಮತದಾನದ ಸಂದರ್ಭದಲ್ಲಿ ಇಲ್ಲಿನ ಮತಗಟ್ಟೆಯೊಂದರಲ್ಲಿ ಮತದಾರರು ಸಿಐಎಸ್ಎಫ್ ಪಡೆಗಳ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ವಯಂ ರಕ್ಷಣೆಗಾಗಿ ಮೀಸಲುಪಡೆಯ ಯೋಧರು ಗುಂಡು ಹಾರಿಸಿದ್ದರಿಂದ, ನಾಲ್ವರು ನಾಗರಿಕರು ಮೃತಪಟ್ಟಿದ್ದರು.
ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೀಕ್ ಅಲಿ ಮಿಯಾ ಅವರು ಮಮತಾ ವಿರುದ್ಧ ದೂರು ನೀಡಿದ್ದಾರೆ. ‘ಚುನಾವಣೆಗೂ ಮುನ್ನ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಮಮತಾ ಅವರು ಆಡಿದ್ದ ಮಾತುಗಳು ಸಿಐಎಸ್ಎಫ್ ವಿರುದ್ಧ ಮತದಾರರು ಸಿಡಿದೇಳಲು ಪ್ರಚೋದಿಸಿದ್ದವು’ ಎಂದು ಸಿದ್ದೀಕ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಭಾಷಣದ ಧ್ವನಿಮುದ್ರಿಕೆಯ ಪ್ರತಿಯನ್ನೂ ಅವರು ದೂರಿನ ಜತೆಗೆ ಸಲ್ಲಿಸಿದ್ದಾರೆ.
‘ನಾಲ್ವರು ನಾಗರಿಕರ ಸಾವಿಗೆ ಮಮತಾ ಅವರೇ ಹೊಣೆ. ಪೊಲೀಸರು ಮಮತಾ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳದಿದ್ದರೆ, ಅವರ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಸಿದ್ದೀಕ್ ಅಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.