ಜಶ್ಪುರ (ಛತ್ತೀಸಗಡ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾಡಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಭಾನುವಾರ ದೂರು ದಾಖಲಿಸಿದ್ದಾರೆ.
‘ರಾಹುಲ್ ಗಾಂಧಿ ಅವರು ಮಾದಕದ್ರವ್ಯ ಕೊಕೇನ್ ಬಳಸುತ್ತಾರೆ’ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದರು. ಇದು ಸುಳ್ಳು ಆರೋಪ ಎಂಬುದು ಸ್ವಾಮಿ ಅವರಿಗೂ ಗೊತ್ತಿದೆ. ಆದರೆ ರಾಹುಲ್ ಅವರನ್ನು ಅಪಮಾನಿಸುವ ಉದ್ದೇಶದಿಂದಲೇ ಅವರು ಈ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆ ರಾಜಕೀಯ ಪಕ್ಷಗಳಲ್ಲಿ ವೈರತ್ವವನ್ನು ಬೆಳೆಸಿ ಶಾಂತಿ ಕದಡಲು ಕಾರಣವಾಗುತ್ತದೆ’ ಎಂದು ಕಾಂಗ್ರೆಸ್ನ ಜಶ್ಪುರ್ ಜಿಲ್ಲಾ ಘಟಕದ ಅಧ್ಯಕ್ಷ ಪವನ್ ಅಗರ್ವಾಲ್ ನೀಡಿರುವ ದೂರಿನಲ್ಲಿ ಹೇಳಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಂಕರ್ಲಾಲ್ ಬಘೇಲ ತಿಳಿಸಿದರು.
‘ಸ್ವಾಮಿ ಅವರ ಹೇಳಿಕೆ ಖಂಡನೀಯ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನುಅವರು ಅಪಮಾನಿಸಿದ್ದಾರೆ. ಇಂಥ ಸುಳ್ಳು ಆರೋಪ ಮಾಡುವ ನೈತಿಕ ಅಥವಾ ಕಾನೂನಾತ್ಮಕ ಅಧಿಕಾರ ಅವರಿಗೆ ಇಲ್ಲ’ ಎಂದು ಕಾಂಗ್ರೆಸ್ ರಾಜ್ಯ ಘಟಕದ ವಕ್ತಾರ ಶೈಲೇಶ್ ನಿತಿನ್ ತ್ರಿವೇದಿ ಹೇಳಿದ್ದಾರೆ.
ಕಾಂಗ್ರೆಸ್ನ ಮಹಿಳಾ ಘಟಕ, ರಾಷ್ಟ್ರೀಯ ವಿದ್ಯಾರ್ಥಿ ಘಟಕ ಸೇರಿದಂತೆ ಬೇರೆಬೇರೆ ಘಟಕಗಳು ರಾಜ್ಯದ ಎಲ್ಲಾ ಜಿಲ್ಲೆಗಳ ಬೇರೆಬೇರೆ ಠಾಣೆಗಳಲ್ಲಿ ಸ್ವಾಮಿ ವಿರುದ್ಧ ದೂರುಗಳನ್ನು ದಾಖಲಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.