ADVERTISEMENT

ಕುರಾನ್‌ ವಿರುದ್ಧ ‘ಸುಪ್ರೀಂ’ಗೆ ಪಿಐಎಲ್‌ ಸಲ್ಲಿಸಿರುವ ರಿಝ್ವಿ ಮೇಲೆ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 13:48 IST
Last Updated 16 ಮಾರ್ಚ್ 2021, 13:48 IST
ವಾಸೀಂ ರಿಝ್ವಿ
ವಾಸೀಂ ರಿಝ್ವಿ   

ಬರೇಲಿ, ಉತ್ತರಪ್ರದೇಶ: ಇಸ್ಲಾಂನ ಪವಿತ್ರ ಗ್ರಂಥ ಕುರಾನ್‌ ಭಯೋತ್ಪಾದನೆ ಉತ್ತೇಜಿಸುತ್ತದೆ ಎಂದು ವಾದಿಸಿ, ಕುರಾನಿನ ಕೆಲವು ಆಯತ್‌ಗಳನ್ನು ತೆಗೆದುಹಾಕುವಂತೆ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಉತ್ತರಪ್ರದೇಶದ ಶಿಯಾ ವಕ್ಫ್‌ ಮಂಡಳಿ ಮಾಜಿ ಅಧ್ಯಕ್ಷ ವಾಸೀಂ ರಿಝ್ವಿ ವಿರುದ್ಧ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿದ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ.

ಅಂಜುಮನ್ ಖುದ್ದಮ್ ಎ ರಸೂಲ್ ಕಾರ್ಯದರ್ಶಿ ಶಾನ್ ಅಹ್ಮದ್ ಮತ್ತು ಇತ್ತೇಹಾದ್ ಎ ಮಿಲ್ಲತ್ ಕೌನ್ಸಿಲ್ ಎಂಬ ಸಂಘಟನೆ ನೀಡಿರುವ ದೂರುಗಳನ್ನು ಆಧರಿಸಿ ಸೋಮವಾರ ಸಂಜೆ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಪಿಸಿಯ ಸೆಕ್ಷನ್ 295 ಎ (ಯಾವುದೇ ವರ್ಗದ, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.

ADVERTISEMENT

ರಾಜಾ ಕ್ರಿಯಾ ಸಮಿತಿಯ ಅಧ್ಯಕ್ಷ ಮೌಲಾನಾ ಅಫ್ರೋಜ್ ರಾಜಾ ಖಾದ್ರಿ, ರಿಜ್ವಿಯ ಹಿಂದೆ ಪಂಥೀಯ ಶಕ್ತಿಗಳು ಕೆಲಸ ಮಾಡುತ್ತಿವೆ ಮತ್ತು ಅವುಗಳ ಮುಖವನ್ನು ತೆರೆದಿಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ಹಲವು ಮುಖಂಡರು ರಿಝ್ವಿ ವಿರುದ್ಧ ಭಾನುವಾರ ಲಕ್ನೋದಲ್ಲಿ ಪ್ರತಿಭಟನೆ ಕೂಡ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.