ಕೋಲ್ಕತ್ತ: ಪಶ್ಚಿಮ ಬಂಗಾಳದ ಟಾಂಗ್ರಾ ಪ್ರದೇಶದ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಬರೋಬ್ಬರಿ 15 ತಾಸುಗಳ ಕಾರ್ಯಾಚರಣೆಯ ಬಳಿಕ ಹತೋಟಿಗೆ ಬಂದಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸಿಂಥೆಟಿಕ್ ಲೆದರ್ ಸಹಿತ ಹಲವು ಸರಕುಗಳನ್ನು ದಾಸ್ತಾನು ಇರಿಸಲಾಗಿದ್ದ ಗೋದಾಮಿಗೆ ಶನಿವಾರ ಸಂಜೆ ಬೆಂಕಿ ಬಿದ್ದಿತ್ತು. ಪಕ್ಕದ ಕಟ್ಟಡಕ್ಕೂ ಬೆಂಕಿ ಹರಡಿತ್ತು. ಬಳಿಕ 15 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಸ್ಥಳೀಯರು ಸಹ ಕಾರ್ಯಾಚರಣೆಗೆ ನೆರವಾಗಿದ್ದರು.
ಬೆಂಕಿ ನಂದಿಸುವ ಕಾರ್ಯಾಚರಣೆಯ ವೇಳೆ ಗಾಯಗೊಂಡಿರುವ ಇಬ್ಬರು ಸಿಬ್ಬಂದಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡದಲ್ಲಿ ಈಗಲೂ ಸಣ್ಣ ಪ್ರಮಾಣದ ಬೆಂಕಿಯಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಗೋದಾಮಿನಲ್ಲಿ ಸಿಂಥೆಟಿಕ್ ಲೆದರ್ (ರೆಕ್ಸಿನ್), ರಾಸಾಯನಿಕ, ಕರ್ಪೂರದ ಎಣ್ಣೆ, ಮದ್ಯ ಇಡಲಾಗಿತ್ತು. ಇದು ಬೆಂಕಿಯ ತೀವ್ರತೆ ಹೆಚ್ಚಾಗಲುಕಾರಣವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.