ನವದೆಹಲಿ: ಕೇಂದ್ರದ ಹೊಸ ಸರ್ಕಾರದ ಮಂತ್ರಿ ಪರಿಷತ್ತಿನ ಮೊದಲ ಸಭೆ ಬುಧವಾರ ನಡೆಯಲಿದೆ. ಪ್ರಧಾನಿ ನರೇಂದ್ರ ಮೊದಿ ಅವರು ತಮ್ಮ ಸರ್ಕಾರದ ಮುಂದಿನ ರೂಪುರೇಷೆಗಳನ್ನು ಚರ್ಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಮುಂದಿನ ಐದು ವರ್ಷಗಳ ಕಾರ್ಯ ಯೋಜನೆಗಳನ್ನು ಮೋದಿ ಅವರು ಸಭೆಯ ಎದುರು ಬಿಚ್ಚಿಡಲಿದ್ದಾರೆ.ಸಚಿವಾಲಯಗಳನ್ನು ಮುನ್ನಡೆಸುವಲ್ಲಿ ರಾಜ್ಯ ಸಚಿವರ ಪಾತ್ರ ಏನು ಎಂದು ವಿವರಿಸಲಿದ್ದಾರೆ. ಅಲ್ಲದೆ ಸಹಾಯಕ ಸಚಿವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸುವಂತೆ ಸಂಪುಟ ಸಚಿವರಿಗೆ ಸೂಚನೆ ನೀಡಬಹುದು ಎಂದು ಹೇಳಲಾಗಿದೆ
ಮಂತ್ರಿ ಪರಿಷತ್ತಿನ ಸಭೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯೂ ಬುಧವಾರ ನಿಗದಿಯಾಗಿದೆ.
ಮಂತ್ರಿ ಪರಿಷತ್ತಿನ ಸಭೆಯು ಮೋದಿ ಅವರ ಹಿಂದಿನ ಸರ್ಕಾರದಲ್ಲೂ ನಿಯಮಿತವಾಗಿ ನಡೆಯುತ್ತಿತ್ತು. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಅವುಗಳನ್ನು ಜನರಿಗೆ ಹೇಗೆ ತಲುಪಿಸಬೇಕು ಎಂಬ ಕುರಿತು ಸಚಿವರೊಂದಿಗೆ ಚರ್ಚಿಸುತ್ತಿದ್ದರು. ಮುಖ್ಯ ಸಚಿವಾಲಯಗಳ ಕಾರ್ಯಕ್ಷಮತೆನ್ನೂ ಅವರು ಪರಿಶೀಲಿಸುತ್ತಿದ್ದರು.
ಮುಂದಿನ ವಾರದಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ಎಲ್ಲ ಸಚಿವಾಲಯಗಳಲ್ಲೂ ರಾಜ್ಯ ಸಚಿವರ ಪಾತ್ರ ಮುಖ್ಯವಾದದ್ದು. ಸದನದಲ್ಲಿ ಕೇಳಲಾದ ಪ್ರಶ್ನೆಗಳನ್ನು ನಿಭಾಯಿಸುವ ಹೊಣೆಗಾರಿಕೆ ಅವರ ಮೇಲಿರುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.