ADVERTISEMENT

ಉತ್ತರ ಕಾಶಿ ಬಳಿ ಹಿಮಪಾತ: ಮತ್ತೆ ಐವರು ಪರ್ವತಾರೋಹಿಗಳ ಶವ ಪತ್ತೆ

ಪಿಟಿಐ
Published 6 ಅಕ್ಟೋಬರ್ 2022, 13:42 IST
Last Updated 6 ಅಕ್ಟೋಬರ್ 2022, 13:42 IST
ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸೈನಿಕರ ತಂಡವು  ಹಿಮಪಾತ ನಡೆದ ಸ್ಥಳಕ್ಕೆ ಗುರುವಾರ ತೆರಳುತ್ತಿದ್ದ ದೃಶ್ಯ –ಪಿಟಿಐ ಚಿತ್ರ  
ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸೈನಿಕರ ತಂಡವು  ಹಿಮಪಾತ ನಡೆದ ಸ್ಥಳಕ್ಕೆ ಗುರುವಾರ ತೆರಳುತ್ತಿದ್ದ ದೃಶ್ಯ –ಪಿಟಿಐ ಚಿತ್ರ     

ಡೆಹ್ರಾಡೂನ್‌: ‘ಉತ್ತರ ಕಾಶಿ ಬಳಿ ಸಂಭವಿಸಿದ್ದಹಿಮಪಾತದಲ್ಲಿ ಸಿಲುಕಿ ಅಸುನೀಗಿರುವ ಪರ್ವತಾರೋಹಿಗಳ ಪೈಕಿ ಮತ್ತೆ ಐವರ ಶವಗಳನ್ನು ಗುರುವಾರ ಹೊರತೆಗೆಯಲಾಗಿದೆ’ ಎಂದು ನೆಹರೂ ಪರ್ವತಾರೋಹಣ ಸಂಸ್ಥೆ (ಎನ್‌ಐಎಂ) ತಿಳಿಸಿದೆ.

ಇದರೊಂದಿಗೆ ಮೃತರ ಒಟ್ಟು ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದ್ದು, ಇನ್ನೂ 22 ಮಂದಿ ನಾಪತ್ತೆಯಾಗಿದ್ದಾರೆ.

ಎನ್‌ಐಎಂನಲ್ಲಿ ತರಬೇತಿ ಪಡೆಯುತ್ತಿದ್ದ 61 ಮಂದಿಯ ತಂಡವು ಮಂಗಳವಾರ ಬೆಳಿಗ್ಗೆ ಪರ್ವತಾರೋಹಣ ಅಭ್ಯಾಸ ನಡೆಸಿ ಹಿಂತಿರುಗುತ್ತಿದ್ದಾಗ ದ್ರೌಪದಿ ಕಾ ದಂಡ ಶಿಖರದ ಬಳಿ ಹಠಾತ್ತನೆ ಹಿಮಪಾತ ಉಂಟಾಗಿತ್ತು. ಹಿಮದಡಿ ಸಿಲುಕಿದ್ದ ನಾಲ್ವರ ಶವಗಳನ್ನು ಮಂಗಳವಾರವೇ ಹೊರತೆಗೆಯಲಾಗಿತ್ತು. ಮೃತರಲ್ಲಿ 7 ಮಂದಿ ಶಿಬಿರಾರ್ಥಿಗಳು ಹಾಗೂ ಇಬ್ಬರು ಮಾರ್ಗದರ್ಶಕರು ಸೇರಿದ್ದಾರೆ.ಒಟ್ಟು ಹತ್ತು ಶವಗಳನ್ನು ಹೊರತೆಗೆಯಲಾಗಿದೆ ಎಂದು ಉತ್ತರಾಖಂಡ ಪೊಲೀಸರು ಬುಧವಾರವೇ ತಿಳಿಸಿದ್ದರು.

ADVERTISEMENT

‘61 ಮಂದಿಯ ತಂಡವು ಪರ್ವತಾರೋಹಣ ಅಭ್ಯಾಸ ನಡೆಸುತ್ತಿತ್ತು. ಈ ಪೈಕಿ 30 ಮಂದಿ ಸುರಕ್ಷಿತವಾಗಿದ್ದಾರೆ. 27 ಮಂದಿಯ ಸುಳಿವು ಸಿಕ್ಕಿಲ್ಲ’ ಎಂದುರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು (ಎಸ್‌ಇಒಸಿ) ಬುಧವಾರ ಹೇಳಿತ್ತು.

‘ಜಮ್ಮು ಮತ್ತು ಕಾಶ್ಮೀರದ ಹೈ ಆಲ್ಟಿಟ್ಯೂಡ್‌ ವಾರ್‌ಫೇರ್‌ ಸ್ಕೂಲ್‌ನ 14 ಮಂದಿಯನ್ನು ಒಳಗೊಂಡಿರುವ ತಂಡವು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಈ ತಂಡವು ಎಸ್‌ಡಿಆರ್‌ಎಫ್‌ ಮತ್ತು ಇಂಡೊ ಟಿಬೇಟನ್ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ತಂಡಗಳ ಜೊತೆಗೂಡಿ ಕೆಲಸ ಮಾಡಲಿದೆ’ ಎಂದು ಎಸ್‌ಇಒಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.