ADVERTISEMENT

ಅಸ್ಸಾಂ ಪ್ರವಾಹ: ಐದು ಮಂದಿ ಸಾವು

ಪಿಟಿಐ
Published 26 ಜುಲೈ 2020, 19:30 IST
Last Updated 26 ಜುಲೈ 2020, 19:30 IST
ಅಸ್ಸಾಂ ಪ್ರವಾಹ ಪೀಡಿತ ಪ್ರದೇಶದ ದೃಶ್ಯ  ( ಕೃಪೆ: ಪಿಟಿಐ)
ಅಸ್ಸಾಂ ಪ್ರವಾಹ ಪೀಡಿತ ಪ್ರದೇಶದ ದೃಶ್ಯ ( ಕೃಪೆ: ಪಿಟಿಐ)   

ಗುವಾಹಟಿ: ‘ಅಸ್ಸಾಂ ರಾಜ್ಯದಲ್ಲಿ ಪ್ರವಾಹವು ಭೀಕರ ಸ್ವರೂಪ ಪಡೆದುಕೊಂಡಿದ್ದು ಭಾನುವಾರ ಐದು ಮಂದಿ ಮೃತರಾಗಿದ್ದಾರೆ. ಒಟ್ಟು 23 ಜಿಲ್ಲೆಗಳ ಅಂದಾಜು 25 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎಎಸ್‌ಡಿಎಂಎ) ಪ್ರಕಟಣೆಯಲ್ಲಿ ತಿಳಿಸಿದೆ.

ಬಾರಪೇಟಾ ಮತ್ತು ಕೊಕ್ರಜಹಾರ್‌ ಜಿಲ್ಲೆಗಳಲ್ಲಿ ತಲಾ ಇಬ್ಬರು ಹಾಗೂ ಮಾರಿಗಾಂವ್‌ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈ ವರ್ಷ ಅಸ್ಸಾಂನಲ್ಲಿ ಪ್ರಕೃತಿ ವಿಕೋಪದಿಂದ ಸತ್ತವರ ಸಂಖ್ಯೆ 128ಕ್ಕೆ ಏರಿದೆ.

ಧೇಮಾಜಿ, ಸೋನಿತ್‌ಪುರ, ವಿಶ್ವನಾಥ, ದಾರಂಗ್‌, ಬಾಕ್ಸಾ, ನಲಬರಿ, ಬಾರಪೇಟಾ, ಚಿರಾಂಗ್‌, ಬೊಂಗಾಯ್‌ಗಾಂವ್‌, ಕೊಕ್ರಜಹಾರ್‌, ಧುಬ್ರಿ, ದಕ್ಷಿಣ ಸಲ್ಮಾರ, ಗೋಲಾಪರಾ, ಕಮ್ರುಪ್‌, ಕಮ್ರುಪ್‌ ಮೆಟ್ರೊಪಾಲಿಟನ್‌, ಮಾರಿಗಾಂವ್‌, ನಗಾಂವ್‌, ಗೋಲಾಘಾಟ್‌, ಜೊರ್ಹಾಟ್‌, ಮಜುಲಿ, ಶಿವಸಾಗರ, ಚಾರೈದಿಯೊ ಮತ್ತು ದಿಬ್ರುಗಢ ಜಿಲ್ಲೆಗಳ 24.76 ಲಕ್ಷ ಜನ ಪ್ರವಾಹ ಪರಿಸ್ಥಿತಿಯಿಂದ ಬಾಧಿತರಾಗಿದ್ದಾರೆ ಎಂದು ಎಎಸ್‌ಡಿಎಂಎ ಹೇಳಿದೆ.

ADVERTISEMENT

ಗೋಲಾಪರಾ (4.7 ಲಕ್ಷ), ಬಾರಪೇಟಾ (3.95 ಲಕ್ಷ) ಹಾಗೂ ಮಾರಿಗಾಂವ್‌ನಲ್ಲಿ (3.33 ಲಕ್ಷ) ಅಧಿಕ ಮಂದಿ ಪ್ರವಾಹದ ಭೀಕರತೆಗೆ ನಲುಗಿದ್ದಾರೆ ಎಂದೂ ತಿಳಿಸಲಾಗಿದೆ.

ಎಸ್‌ಡಿಆರ್‌ಎಫ್‌, ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತಗಳ ನೆರವಿನಿಂದ ಹಿಂದಿನ 24 ಗಂಟೆಗಳಲ್ಲಿ ಒಟ್ಟು 188 ಮಂದಿಯನ್ನು ರಕ್ಷಿಸಲಾಗಿದೆ.

‘ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರವು ಅಸ್ಸಾಂ ಸರ್ಕಾರಕ್ಕೆ ಎಲ್ಲಾ ಬಗೆಯ ನೆರವು ನೀಡಲಿದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲಾ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.