ADVERTISEMENT

ತಮಿಳುನಾಡು ಸಚಿವರ ಕ್ಷಮೆ ಕೋರಿದ್ದ ಬಿಜೆಪಿ ಜಿಲ್ಲಾಧ್ಯಕ್ಷನ ಉಚ್ಚಾಟನೆ 

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 5:34 IST
Last Updated 14 ಆಗಸ್ಟ್ 2022, 5:34 IST
ಶರವಣನ್‌  (ಫೇಸ್‌ಬುಕ್‌ ಚಿತ್ರ: facebook.com/drpsaravanan1)
ಶರವಣನ್‌ (ಫೇಸ್‌ಬುಕ್‌ ಚಿತ್ರ: facebook.com/drpsaravanan1)   

ಮಧುರೈ: ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್‌ ತ್ಯಾಗರಾಜನ್‌ ಅವರ ಕಾರಿನ ಮೇಲೆ ಮಧುರೈನಲ್ಲಿ ಚಪ್ಪಲಿ ತೂರಿದ ಐವರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆ, ಘಟನೆಯನ್ನು ಖಂಡಿಸಿ, ಸಚಿವರ ಕ್ಷಮೆ ಕೋರಿದ ಬಿಜೆಪಿಯ ಮಧುರೈ ಜಿಲ್ಲಾ ಘಟಕದ ಅಧ್ಯಕ್ಷನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಮಧುರೈನ ವಿಮಾನ ನಿಲ್ದಾಣದಲ್ಲಿ ಶನಿವಾರ ಸಚಿವರ ಕಾರಿನ ಮೇಲೆ ಚಪ್ಪಲಿ ತೂರಲಾಗಿತ್ತು. ಪ್ರಕರಣದಲ್ಲಿ ಬಂಧಿಯಾಗಿರುವ ಐವರು ಬಿಜೆಪಿ ಕಾರ್ಯಕರ್ತರ ಮೇಲೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಧುರೈ ಪೊಲೀಸ್‌ ಆಯುಕ್ತರು ತಿಳಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಬಿಜೆಪಿಯ ಮಧುರೈ ಜಿಲ್ಲಾ ಘಟಕದ ಅಧ್ಯಕ್ಷ ಶರವಣನ್, ‘ಮಧುರೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ನೋವುಂಟು ಮಾಡಿದೆ. ಮಧ್ಯರಾತ್ರಿ ಸಚಿವರನ್ನು ಭೇಟಿಯಾಗಿ ಘಟನೆಗೆ ಕ್ಷಮೆಯಾಚಿಸಿದ್ದೇನೆ. ನಮ್ಮ ಕಾರ್ಯಕರ್ತರು ಅಂಕೆ ಮೀರಿ ವರ್ತಿಸಿರುವುದು ಬೇಸರ ತರಿಸಿದೆ’ ಎಂದಿದ್ದರು.

ADVERTISEMENT

'ನನಗೆ ಬಿಜೆಪಿ ಹುದ್ದೆಗಿಂತ ಶಾಂತಿ ಮುಖ್ಯ. ನಾನು ಬಿಜೆಪಿಯಲ್ಲಿ ಮುಂದುವರಿಯುವುದಿಲ್ಲ. ಬೆಳಗ್ಗೆ ಬಿಜೆಪಿಗೆ ರಾಜೀನಾಮೆ ನೀಡಲಿದ್ದೇನೆ. ಡಿಎಂಕೆ ಸೇರುವ ಬಗ್ಗೆ ನಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಡಿಎಂಕೆ ಸೇರುವುದರಲ್ಲಿ ತಪ್ಪೇನೂ ಇಲ್ಲ’ ಎಂದು ಶರವಣನ್ ಹೇಳಿದ್ದರು.

ಸರವಣನ್‌ ಅವರ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿಯು ಅವರನ್ನು ಉಚ್ಚಾಟನೆ ಮಾಡಿದೆ. ‘ಶಿಸ್ತು ಉಲ್ಲಂಘಿಸಿ, ಪಕ್ಷದ ಹೆಸರಿಗೆ ಕಳಂಕ ತಂದಿದ್ದಕ್ಕಾಗಿ ಬಿಜೆಪಿ ಮಧುರೈ ಜಿಲ್ಲಾಧ್ಯಕ್ಷ ಶರವಣನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.