
ನವದೆಹಲಿ: ‘ಅರಣ್ಯ (ಸಂರಕ್ಷಣೆ) ಕಾಯ್ದೆಗೆ 2023ರಲ್ಲಿ ತಿದ್ದುಪಡಿ ಮಾಡಿ ಅರಣ್ಯ ನಿರ್ವಹಣೆಯಲ್ಲಿ ಖಾಸಗಿಯವರ ಪ್ರವೇಶಕ್ಕೆ ರಹದಾರಿ ಸೃಷ್ಟಿಸಲಾಗಿದೆ’ ಎಂದು ಕಾಂಗ್ರೆಸ್ ಬುಧವಾರ ದೂರಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಬಿಡುಗಡೆ ಮಾಡಿರುವ ಸುತ್ತೋಲೆಯನ್ನು ಲಗತ್ತಿಸಿ ಕೇಂದ್ರದಲ್ಲಿ ಈ ಹಿಂದೆ ಪರಿಸರ ಸಚಿವರಾಗಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾರ್ಗಸೂಚಿಗೆ ಕೆಲವು ಬದಲಾವಣೆಗಳನ್ನು ಮಾಡಿ, ಕೇಂದ್ರ ಸರ್ಕಾರವು ಜ.2ರಂದು ಈ ಸುತ್ತೊಲೆಯನ್ನು ಹೊರಡಿಸಿತ್ತು.
‘1980ರ ಅರಣ್ಯ (ಸಂರಕ್ಷಣೆ) ಕಾಯ್ದೆಗೆ 2023ರಲ್ಲಿ ತಿದ್ದುಪಡಿಗಳನ್ನು ತಂದು, ಇಡೀ ಕಾಯ್ದೆಯನ್ನೇ ಬುಲ್ಡೋಜರ್ ಮೂಲಕ ನೆಲಸಮ ಮಾಡಲಾಯಿತು. ಈ ಕಾಯ್ದೆಗೆ ವನ (ಸಂರಕ್ಷಣೆ ಮತ್ತು ಸಂವರ್ಧನೆ) ಅಧಿನಿಮಯ, 1980 ಎಂದೂ ಮರುನಾಮಕರಣ ಮಾಡಿತು. ಈಗ ಜ.2ರ ಸುತ್ತೋಲೆಯು ಅರಣ್ಯ ನಿರ್ವಹಣೆಯಲ್ಲಿ ಖಾಸಗಿಯವರಿಗೆ ಅವಕಾಶ ನೀಡಿರುವುದನ್ನು ಸಾಕ್ಷೀಕರಿಸಿದೆ’ ಎಂದರು.
Cut-off box - ಸುತ್ತೋಲೆಯಲ್ಲೇನಿದೆ? ಅರಣ್ಯ ಭೂಮಿಯನ್ನು ಪುನಶ್ಚೇತನಗೊಳಿಸಲು ತಜ್ಞರ ಸಮಿತಿಯ ಸಲಹೆಯಂತೆ ಕೆಲವು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ: * ನಾಶಗೊಂಡಿರುವ ಅರಣ್ಯಕ್ಕೆ ಮರುಜೀವ ಅಂದರೆ– ಅರಣ್ಯೀಕರಣ ಮಾಡುವುದು ಅಥವಾ ಪ್ಲಾಂಟೇಷನ್ ಮಾಡಬಹುದು. ಇದಕ್ಕೆ ಆಯಾ ರಾಜ್ಯ ಸರ್ಕಾರಗಳು ಕೇಂದ್ರಾಡಳಿತ ಪ್ರದೇಶಗಳು ಪರಸ್ಪರ ಒಪ್ಪಿಗೆ ನೀಡಬೇಕು. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆ ಕೂಡ ಅರಣ್ಯ ಪುನಶ್ಚೇತನ ಕಾರ್ಯ ನಡೆಸಬಹುದು * ಅರಣ್ಯ ಉತ್ಪನ್ನಗಳನ್ನು ಸುಸ್ಥಿರವಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಈ ಪ್ಲಾಂಟೇಷನ್ಗಳ ನಿರ್ವಹಣೆ ಆದಾಯ ಹಂಚಿಕೆ ಬಗ್ಗೆ ರಾಜ್ಯ ಸರ್ಕಾರಗಳು ಸೂಕ್ತ ನಿಯಮ ಮಾರ್ಗಸೂಚಿಗಳನ್ನು ರೂಪಿಸಿಕೊಳ್ಳಬಹುದು * ಇಂಥ ಯೋಜನೆಗಳಿಗೆ ಮೊದಲಿಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಬೇಕು. ರಾಜ್ಯ ಅರಣ್ಯ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಾರ್ಯಗಳು ನಡೆಯಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.