ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಟಿಆರ್ಎಫ್/ಎಲ್ಇಟಿ ಉಗ್ರಗಾಮಿ ಸಂಘಟನೆಗಳ ಬೆಂಬಲಿತ ನಾಲ್ವರು ಹೈಬ್ರಿಡ್ ಉಗ್ರರನ್ನು ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಬಂಧಿಸಲಾಗಿದೆ.
‘ಬೆಮಿನಾ ಪ್ರದೇಶದಲ್ಲಿ ಉಗ್ರರ ಚಲನವಲನದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಚೆಕ್ ಪೋಸ್ಟ್ ನಿರ್ಮಿಸಲಾಗಿತ್ತು. ಚೆಕ್ ಪೋಸ್ಟ್ ಬಳಿಗೆ ಬಂದ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದ್ದರು. ಅಧಿಕಾರಿಗಳ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದಾಗ ಅವರನ್ನು ಬೆನ್ನತ್ತಿದ್ದ ಜಂಟಿ ಕಾರ್ಯಾಚರಣೆ ಪಡೆ ಬಂಧಿಸಿದೆ’ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಉಸ್ಮಾನಾಬಾದ್ ಪ್ರದೇಶದ ತವೂಸ್ ರಸೂಲ್ ಗಡ ಮತ್ತು ಸಲೀಮ್ ಜನ್ ಭಟ್ ಎಂದು ಗುರುತಿಸಲಾಗಿದೆ.
‘ಬಳಿಕ, ಅವರ ಬಳಿ ಶೋಧ ನಡೆಸಿದಾಗ ಚೀನಾದ ಒಂದು ಪಿಸ್ತೂಲ್, ಮ್ಯಾಗಜಿನ್ ಮತ್ತು 10 ಜೀವಂತ ಗುಂಡುಗಳು ಸಿಕ್ಕಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ವಿಚಾರಣೆ ವೇಳೆ ಭಯೋತ್ಪಾದಕ ಸಂಘಟನೆಗಳಾದ ಟಿಆರ್ಎಫ್/ಎಲ್ಇಟಿಗೆ ಹೈಬ್ರಿಡ್ ಭಯೋತ್ಪಾದಕರಾಗಿ ಚಟುವಟಿಕೆ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ನಗರದಲ್ಲಿ ನಿರ್ದಿಷ್ಟ ವ್ಯಕ್ತಿಗಳ ಹತ್ಯೆಗೆ ಪಾಕಿಸ್ತಾನದ ಆದೇಶದ ಮೇರೆಗೆ ಪಿಸ್ತೂಲ್ ಸರಬರಾಜು ಮಾಡುತ್ತಿದ್ದಾಗಿಯೂ ಅವರು ಹೇಳಿದ್ದಾರೆ.
ಬಂಧಿತರು ನೀಡಿದ ಮಾಹಿತಿ ಮೇರೆಗೆ ಶ್ರೀನಗರದ ಹಮ್ದಾನಿಯಾ ಕಾಲೊನಿಯನ್ನು ಸುತ್ತುವರಿದ ಜಂಟಿ ಕಾರ್ಯಾಚರಣೆಯ ತಂಡ, ಇನ್ನಿಬ್ಬರು ಹೈಬ್ರಿಡ್ ಉಗ್ರರನ್ನು ಬಂಧಿಸಿದೆ. ಬಂಧಿತರನ್ನು ಅಬ್ದುಲ್ ಹಮೀದ್ ರಹ್ ಅಲಿಯಾಸ್ ಅಲಿ ಮತ್ತು ಸಜದ್ ಅಹಮ್ಮದ್ ಮರಾಜಿ ಎಂದು ಗುರುತಿಸಲಾಗಿದೆ. ಇವರ ಬಳಿಯೂ ಎರಡು ಚೀನಾ ಪಿಸ್ತೂಲ್, ಎರಡು ಮ್ಯಾಗಜಿನ್ ಮತ್ತು 10 ಸುತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.