ವಾರಣಾಸಿ : ಸ್ಥಳೀಯ ಹೋಟೆಲ್ ಉದ್ಯಮಿಯ ವಿಶಾಲ್ ಸಿಂಗ್ ನೀಡಿರುವ ಆರೋಪದಡಿ ಭೋಜಪುರಿ ಭಾಷೆಯ ನಟ ಹಾಗೂ ಹಾಡುಗಾರ ಪವನ್ ಸಿಂಗ್ ಹಾಗೂ ಆತನ ಸಹಚರರ ವಿರುದ್ದ ಹಣ ವಂಚನೆಯ ಪ್ರಕರಣವನ್ನು ದಾಖಲು ಮಾಡುವಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶಿಸಿದೆ.
ಘಟನೆ ಆ.13 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ವಿಶಾಲ್ ಸಿಂಗ್ ಕಂಟೋನ್ಮೆಂಟ್ ಪೊಲೀಸ್ ಠಾಣೆ ಮತ್ತು ಪೊಲೀಸ್ ಆಯುಕ್ತರಿಗೆ ದೂರನ್ನು ನೀಡಿದ್ದರು. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ವಿಶಾಲ್ ಸಿಂಗ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯವು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸಿದೆ.
ಪವನ್ ಸಿಂಗ್ ನಟನೆಯ ‘ಬಾಸ್’ ಸಿನಿಮಾಕ್ಕೆ ವಿಶಾಲ್ ಸಿಂಗ್ ಹಣ ಹೂಡಿದ್ದರು. ಸಿನಿಮಾ ತೆರೆಕಂಡ ನಂತರ ಹಣವನ್ನು ಪಾವತಿಸುವುದಾಗಿ ಮಾತುಕತೆ ನಡೆದಿತ್ತು. ಆದರೆ ಹಣದ ಪಾವತಿ ಈ ವರೆಗೆ ಆಗಿಲ್ಲ ಎಂದು ವಿಶಾಲ್ ಸಿಂಗ್ ಪರ ವಕೀಲ ಆಶಿಶ್ ಸಿಂಗ್ ಆರೋಪಿಸಿದ್ದಾರೆ.
ಬಾಸ್ ಸಿನಿಮಾದ ನಿರ್ಮಾಣದ ವೇಳೆಯಲ್ಲಿ ವಿಶಾಲ್ ಸಿಂಗ್ ಮುಂಬೈ ಮೂಲದ ಸಿನಿಮಾ ನಿರ್ದೇಶಕ ಪ್ರೇಮ್ ಶಂಕರ್ ರೈ ರವರನ್ನು ಭೇಟಿಯಾಗಿದ್ದರು. ವಿಶಾಲ್ ಸಿಂಗ್ಗೆ ಲಾಭದ ಭರವಸೆ ನೀಡಿ ಚಿತ್ರದಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಲಾಯಿತು. ಮನವೊಲಿಸಲು ಪವನ್ ಸಿಂಗ್ ಅವರೊಂದಿಗೆ ಸಭೆಯನ್ನು ಏರ್ಪಡಿಸಲಾಗಿತ್ತು ಎಂದು ವಿಶಾಲ್ ಸಿಂಗ್ ಪರ ವಕೀಲರು ಹೇಳಿದ್ದಾರೆ.
2018 ರಲ್ಲಿ ₹32.60 ಲಕ್ಷ ಹಣವನ್ನು ವಿಶಾಲ್ ಸಿಂಗ್ ಬೇರೆ ಬೇರೆ ಖಾತೆಗಳಿಂದ ವರ್ಗಾಯಿಸಲಾಗಿದೆ. ಬಳಿಕ ಚಿತ್ರದ ನಿರ್ಮಾಪಕನೆಂದು ಹೇಳಿ ಬಂದ ಲಾಭದಲ್ಲಿ ಶೇ 50 ರಷ್ಟು ನೀಡುವುದಾಗಿ ಹೇಳಲಾಗಿದೆ. ಬಳಿಕ ₹1.25 ಕೋಟಿಯನ್ನು ವಿಶಾಲ್ ಸಿಂಗ್ ಬಾಸ್ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ವಕೀಲರು ಹೇಳಿದ್ದಾರೆ.
ಚಿತ್ರ ಬಿಡುಗಡೆಯಾದ ನಂತರ ವಿಶಾಲ್ ಸಿಂಗ್ಗೆ ಬರಬೇಕಿದ್ದ ಲಾಭದ ಪಾಲನ್ನು ನೀಡಿಲ್ಲ. ಬಾಕಿ ಹಣ ಕೇಳಿದಾಗ, ನಟ ಪವನ್ ಸಿಂಗ್ ಅವರು ವಿಶಾಲ್ ಸಿಂಗ್ಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.