ADVERTISEMENT

ಶ್ರೀನಗರ: 16 ತಿಂಗಳಲ್ಲಿ ಯಾವುದೇ ಉಗ್ರರ ಹತ್ಯೆಯಾಗಿಲ್ಲ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 15:48 IST
Last Updated 21 ಏಪ್ರಿಲ್ 2024, 15:48 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶ್ರೀನಗರ: ಜಮ್ಮು–ಕಾಶ್ಮೀರದ ಶ್ರೀನಗರದಲ್ಲಿ 2019ರ ನಂತರ ಏರುಗತಿಯಲ್ಲಿದ್ದ ಭಯೋತ್ಪಾದಕ ಚಟುವಟಿಕೆಗಳ ಸಂಖ್ಯೆ ಸದ್ಯ ತೀವ್ರ ಕಡಿಮೆಯಾಗಿದ್ದು, ಜಿಲ್ಲೆಯಲ್ಲಿ ಕಳೆದ 16 ತಿಂಗಳಲ್ಲಿ ಯಾವುದೇ ಉಗ್ರರ ಹತ್ಯೆಯಾಗಿಲ್ಲ.

2019ರ ಆರಂಭದಿಂದ 2022ರ ಅಂತ್ಯದವರೆಗೆ ಜಿಲ್ಲೆಯಲ್ಲಿ 69 ಉಗ್ರರನ್ನು ಹತ್ಯೆ ಮಾಡಲಾಗಿದೆ. 200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ. 

ADVERTISEMENT

2023 ಮತ್ತು 2024ರ ಮೊದಲ ನಾಲ್ಕು ತಿಂಗಳಲ್ಲಿ ಯಾವುದೇ ಉಗ್ರರ ಹತ್ಯೆಯಾಗಿಲ್ಲ. ಆದರೆ 2023 ಮತ್ತು 2024ರಲ್ಲಿ ಕೆಲ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಹತ್ಯೆಯಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಬ್ಬರು ಸ್ಥಳೀಯ ಉಗ್ರರಾದ ಮೊಮಿನ್‌ ಗುಲ್ಜಾರ್‌ ಮಿರ್ ಮತ್ತು ಬಾಸಿತ್‌ ದಾರ್‌ ಶ್ರೀನಗರದಲ್ಲಿ ಸಕ್ರಿಯರಾಗಿದ್ದರು. ಆದರೆ ಪೊಲೀಸ್‌ ಮತ್ತು ಭದ್ರತಾ ಪಡೆಗಳ ಅವಿರತ ಕಾರ್ಯಾಚರಣೆಯಿಂದಾಗಿ ಅವರು ಪಲಾಯನ ಮಾಡಿದ್ದಾರೆ’ ಎಂದು ಅವರು ತಿಳಿಸಿದರು.

ಈ ಉಗ್ರರೇ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಸ್ರೂರ್‌ ಅಹ್ಮದ್‌ ವಾನಿ ಅವರ ಹತ್ಯೆಯಲ್ಲಿ  ಭಾಗಿಯಾಗಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. 

ಶ್ರೀನಗರವು 2014ರಿಂದ 2019ರ ಆರಂಭದವರೆಗೆ ಉಗ್ರವಾದದಿಂದ ಮುಕ್ತವಾಗಿತ್ತು. ಆದರೆ ನಂತರದ ಮೂರು ವರ್ಷ ಕಾಶ್ಮೀರದ ಉಗ್ರ ಚಟುವಟಿಕೆಯ ಕೇಂದ್ರ ಸ್ಥಾನವಾಗಿ ಮಾರ್ಪಟ್ಟಿತ್ತು. ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಂಡ ನಂತರ ಉಗ್ರರು ಶ್ರೀನಗರ ಮತ್ತು ಅದರ ಹೊರವಲಯಗಳಲ್ಲಿ ನೆಲೆ ಸ್ಥಾಪಿಸಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.