ಉದಯಪುರ, ರಾಜಸ್ಥಾನ: ಭಾರತವು ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಶೆರ್ಪಾ ಸಭೆಯು ಇಲ್ಲಿ ಭಾನುವಾರ ಆರಂಭವಾಯಿತು. ನಾಲ್ಕು ದಿನಗಳ ಸಭೆ ಇದಾಗಿದೆ.
ಭಾರತದ ಶೆರ್ಪಾ ಅಮಿತಾಭ್ ಕಾಂತ್ ಅವರು ಈ ಸಭೆಗೆ ಚಾಲನೆ ನೀಡಿದರು. ‘ಜಗತ್ತು ಕೋವಿಡ್– 19 ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ, ಎಲ್ಲರನ್ನೂ ಒಳಗೊಂಡ, ಚೇತರಿಸಿಕೊಳ್ಳುವ ಸಾಮರ್ಥ್ಯವುಳ್ಳ ಮತ್ತು ಸುಸ್ಥಿರ ಅಭಿವೃದ್ಧಿಗೆ ನಕ್ಷೆ ತಯಾರಿಸಬೇಕು. ಉತ್ತಮ ಜೀವನ ರೂಪಿಸುವ, ಉತ್ತಮ ಆರೋಗ್ಯ ಸೇವೆ ನೀಡುವ, ಜನಜೀವನ ಗುಣಮಟ್ಟ ಹೆಚ್ಚಿಸುವ ಕೆಲಸಕ್ಕೆ ವೇಗ ನೀಡಬೇಕು’ ಎಂದು ಅವರು ಹೇಳಿದರು.
‘ನಾವು ದೊಡ್ಡ ಮಟ್ಟದಲ್ಲಿ ಭೌಗೋಳಿಕ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಜಾಗತಿಕ ಪೂರೈಕೆ ಸರಪಳಿ ಕಡಿದು ಹೋಗಿರುವುದನ್ನು ನಾವು ನೋಡುತ್ತಿದ್ದೇವೆ. ಹಲವರು ದೇಶಗಳು ಸಾಲದ ಸುಳಿಯಲ್ಲಿ ಮತ್ತು ಹವಾಮಾನ ವೈಪರೀತ್ಯದ ಬಿಕ್ಕಟ್ಟಿನಲ್ಲಿಸಿಲುಕಿವೆ’ ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಕಾಂತ್ ಅವರು, ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿರುವುದರಿಂದ ಅಭಿವೃದ್ಧಿಶೀಲ ದೇಶಗಳ ಸಮಸ್ಯೆಗಳ ಕುರಿತ ಕಾರ್ಯಸೂಚಿಯನ್ನು ಬಹುಪಕ್ಷೀಯ ವೇದಿಕೆಗಳ ಮುಂದಿರಿಸಲು ಅವಕಾಶ ದೊರೆತಂತಾಗಿದೆ ಎಂದರು.
ಶೆರ್ಪಾ ಸಭೆಯಲ್ಲಿ ಹಲವಾರು ಸಾಪ್ರದಾಯಿಕ ಕಲೆಗಳ ಪ್ರದರ್ಶನ ಮತ್ತು ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.