
ನವದೆಹಲಿ: 2019ರಲ್ಲಿ ಗಡಿಚಿರೋಲಿಯಲ್ಲಿ ಪೊಲೀಸ್ ವಾಹನವನ್ನು ಕಚ್ಚಾಬಾಂಬ್ನಿಂದ ಸ್ಫೋಟಿಸಿ 15 ಮಂದಿ ಪೊಲೀಸರ ಸಾವಿಗೆ ಕಾರಣರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲರ ಕುರಿತು ಸಹಾನೂಭುತಿ ಹೊಂದಿದ ಕೈಲಾಶ್ ರಾಮ್ಚಂದಾನಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ.
‘ಆರೋಪಿಯ ಕೈಗಳು ಪೊಲೀಸರ ರಕ್ತದ ಕಲೆಗಳನ್ನು ಹೊಂದಿವೆ’ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆರೋಪಿಸಿದರೂ ಕೂಡ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರ ಪೀಠವು ವಿವಿಧ ಕಠಿಣ ಷರತ್ತುಗಳನ್ನು ವಿಧಿಸಿ, ಆರೋಪಿಗೆ ಮಧ್ಯಂತರ ಜಾಮೀನು ನೀಡಿದೆ.
2019ರ ಜೂನ್ 29ರಂದು ಕೈಲಾಶ್ ಅವರನ್ನು ಬಂಧಿಸಲಾಗಿತ್ತು. ಆಗಿನಿಂದಲೂ ಆರೋಪಿಯು ಜೈಲಿನಲ್ಲಿರುವ ಕುರಿತು ಉಲ್ಲೇಖಿಸಿದ ನ್ಯಾಯಪೀಠ, ‘ಎನ್ಐಎ ವಿಶೇಷ ನ್ಯಾಯಾಲಯದ ಅನುಮತಿ ಪಡೆಯದೇ, ಆರೋಪಿಯು ಗಡಿಚಿರೋಲಿ ಬಿಟ್ಟುಹೋಗುವಂತಿಲ್ಲ’ ಎಂಬ ಷರತ್ತು ವಿಧಿಸಿದೆ.
ಮುಂಬೈನಲ್ಲಿರುವ ಎನ್ಐಎ ನ್ಯಾಯಾಲಯಕ್ಕೆ ಹಾಜರಾಗಲು ಮಾತ್ರ ಮೂಲ ಸ್ಥಾನವನ್ನು ಬಿಟ್ಟು ತೆರಳಬಹುದು. ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ಹಾಜರಾಗಬೇಕು. ಮೊಬೈಲ್ ಅನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕು ಎಂಬ ಷರತ್ತುಗಳನ್ನೂ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.