ADVERTISEMENT

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿ; ಕಸದ ವಾಹನದಲ್ಲೇ ಅಂತಿಮ ಯಾತ್ರೆ!

ಪಿಟಿಐ
Published 4 ಮೇ 2021, 16:07 IST
Last Updated 4 ಮೇ 2021, 16:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಔರಂಗಾಬಾದ್: ಆಂಬುಲೆನ್ಸ್‌ ಲಭ್ಯವಿಲ್ಲದ ಕಾರಣ ಕೋವಿಡ್-19 ರೋಗಿಯ ಮೃತದೇಹವನ್ನು ಕಸದ ವಾಹನದಲ್ಲೇ ಸ್ಮಶಾನಕ್ಕೆ ಸಾಗಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿವೆ.

ಮಹಾರಾಷ್ಟ್ರದ ಒಸ್ಮನಾಬಾದ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಹೆಚ್ಚುವರಿ ಹಣ ನೀಡುವುದಾಗಿ ಹೇಳಿದರೂ ಖಾಸಗಿ ವಾಹನಗಳು ಮೃತದೇಹವನ್ನು ಸಾಗಿಸಲು ಹಿಂದೇಟು ಹಾಕಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರದಂದು ಕಿನ್ಹಿ ಗ್ರಾಮದ ನಿವಾಸಿಯೊಬ್ಬರು ಏಳು ಕಿ.ಮೀ. ದೂರದಲ್ಲಿರುವ ನೆರೆಯ ಟೆರ್ ಗ್ರಾಮದ ಖಾಸಗಿ ವೈದ್ಯರನ್ನು ಸಂಪರ್ಕಿಸಲು ಹೋಗಿ ಕ್ಲಿನಿಕ್ ಹೊರಗಡೆ ಕುಸಿದು ಬಿದ್ದು ಅಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಪೊಲೀಸರು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ತಲುಪಿಸಿದರು. ಬಳಿಕ ನಡೆಸಿದ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಮೃತ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಮೃತದೇಹವನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಆದರೆ ಮೃತದೇಹವನ್ನು ಸಾಗಿಸಲು ಆಂಬುಲೆನ್ಸ್ ಲಭ್ಯವಿರಲಿಲ್ಲ.

ಟೆರ್ ಆಸ್ಪತ್ರೆಯಲ್ಲಿರುವ ಆಂಬ್ಯುಲೆನ್ಸ್ ಅನ್ನು ಗರ್ಭಿಣಿಯರಿಗಾಗಿ ಮಾತ್ರ ಮೀಸಲಿರಿಸಲಾಗಿತ್ತು. ಅದನ್ನು ಕೋವಿಡ್ ರೋಗಿಗಳಿಗೆ ಬಳಸುವಂತಿಲ್ಲ. ಆದರೂ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಲು ಆಟೋರಿಕ್ಷಾ ಸೇರಿದಂತೆ ಇತರೆ ಖಾಸಗಿ ವಾಹನಗಳನ್ನು ಸಂಪರ್ಕಿಸಲಾಯಿತು. ಆದರೆ ಎಲ್ಲರೂ ನಿರಾಕರಿಸಿದರುಎಂದು ಕಿನ್ಹಿ ಗ್ರಾಮದ ಸರಪಂಚ್ ವಿಜಯ್ ಹಜ್ಗಡೆ ಹೇಳಿದ್ದಾರೆ.

ಅಂತಿಮವಾಗಿ ತ್ಯಾಜ್ಯ ವಿಲೇವಾರಿ ಟ್ರಕ್‌ನಲ್ಲಿಮೃತದೇಹದ ಅಂತಿಮ ಯಾತ್ರೆಯನ್ನು ನಡೆಸಲಾಯಿತು ಎಂದವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.