ADVERTISEMENT

ಬಾಲ್ಯ ವಿವಾಹ ಆರೋಪಿಗಳ ಬಂಧನ ವಿರುದ್ಧ ಗುವಾಹಟಿ ಹೈಕೋರ್ಟ್‌ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 16:02 IST
Last Updated 15 ಫೆಬ್ರುವರಿ 2023, 16:02 IST
   

ಗುವಾಹಟಿ: ಬಾಲ್ಯ ವಿವಾಹದ ವಿರುದ್ಧ ರೂಪಿಸಲಾಗಿರುವ ಕಠಿಣ ಕಾನೂನುಗಳಿಗೆ ಸಂಬಂಧಿಸಿ ಭಾರಿ ಸಂಖ್ಯೆಯಲ್ಲಿ ಜನರನ್ನು ಬಂಧಿಸಿರುವುದರ ವಿರುದ್ಧ ಗುವಾಹಟಿ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ‘ಈ ಕ್ರಮವು ಜನರ ಖಾಸಗಿ ಜೀವನದಲ್ಲಿ ದುಷ್ಪರಿಣಾಮ ಬೀರಲಿದೆ’ ಎಂದು ಹೈಕೋರ್ಟ್‌ ಹೇಳಿದೆ.

ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿ ಮತ್ತು ಮಧ್ಯಂತರ ಜಾಮೀನು ಅರ್ಜಿಗಳ ವಿಚಾರಣೆ ನೀಡಿರುವ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಮನ್‌ ಶ್ಯಾಮ್‌ ಅವರು ಎಲ್ಲಾ ಅರ್ಜಿದಾರರನ್ನು ಜಾಮೀನಿನ ಮೇಲೆ ಕೂಡಲೇ ಬಿಡುಗಡೆ ಮಾಡುವಂತೆ ಆದೇಶ ನೀಡಿದರು.

ಬಾಲ್ಯ ವಿವಾಹದ ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ– 2012 (ಪೋಕ್ಸೊ) ಅಡಿ ಮೊಕದ್ದಮೆ ಮತ್ತು ಅತ್ಯಾಚಾರ ವಿರುದ್ಧದ ಮೊಕದ್ದಮೆ ದಾಖಲಿಸುವ ನಿಯಮದ ಕುರಿತೂ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್‌, ಈ ನಿಯಮವನ್ನು ‘ಅಸಂಬದ್ಧ’ ಎಂದು ಕರೆದಿದೆ. ‘ಈ ಬಂಧನಗಳು ಜನರ ಖಾಸಗಿ ಜೀವನವನ್ನು ಸಂಕಷ್ಟಕ್ಕೀಡು ಮಾಡುತ್ತದೆ. ಬಂಧಿತರಲ್ಲಿ ಮಕ್ಕಳಿದ್ದಾರೆ, ಕುಟುಂಬಸ್ಥರಿದ್ದಾರೆ, ವಯೋವೃದ್ಧರಿದ್ದಾರೆ. ಅವರನ್ನೆಲ್ಲ ಬಂಧಿಸುವುದು ಉತ್ತಮ ಚಿಂತನೆಯಲ್ಲ’ ಎಂದು ಹೇಳಿದೆ.

ADVERTISEMENT

‘ಇದು ಬಂಧಿಸಿ ವಿಚಾರಣೆಗೊಳಪಡಿಸುವಂಥ ವಿಚಾರವಲ್ಲ. ನೀವು ಕಾನೂನು ರೀತಿ ಕ್ರಮ ಕೈಗೊಳ್ಳಿ. ಈ ವಿಚಾರದಲ್ಲಿ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ಯಾರಾದರೂ ನಿಮಗೆ ತಪ್ಪಿತಸ್ಥರೆಂದು ಕಂಡರೆ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿ. ಅವರ ದೋಷ ಸಾಬೀತಾದರೆ ಅವರು ಶಿಕ್ಷೆ ಅನುಭವಿಸಲಿ ಎಂದು ನ್ಯಾಯಮೂರ್ತಿ ಸುಮನ್‌ ರಾಜ್ಯ ಸರ್ಕಾರ ಉದ್ದೇಶಿಸಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.