ADVERTISEMENT

ಸರ್ಕಾರಿ ಜಮೀನಿನಲ್ಲಿ ಅಕ್ರಮ ಗ್ರಂಥಾಲಯ: ಬಿಜೆಪಿ ಸಂಸದ ಗಂಭೀರ್‌ಗೆ ಕೋರ್ಟ್ ಸಮನ್ಸ್

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 11:06 IST
Last Updated 3 ನವೆಂಬರ್ 2022, 11:06 IST
ಗೌತಮ್‌ ಗಂಭೀರ್‌
ಗೌತಮ್‌ ಗಂಭೀರ್‌   

ನವದೆಹಲಿ: ದೆಹಲಿ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರ ಮೇಲೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗ್ರಂಥಾಲಯ ಕಟ್ಟಿಸಿರುವ ಆರೋಪ ಕೇಳಿ ಬಂದಿದೆ.

ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಬೇಕು ಎಂದು ದೆಹಲಿ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಡಿಸೆಂಬರ್‌ 13 ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್‌ನಲ್ಲಿ ಸೂಚಿಸಲಾಗಿದೆ.

ಗಂಭೀರ್‌ ಮೇಲೆ ಇರುವ ಆರೋಪ ಏನು?
ದೆಹಲಿಯ ಕಾರ್‌ಕಾರ್ದೂಮ ಬಳಿ ಇರುವ, ದೆಹಲಿ ಪಾಲಿಕೆಗೆ ಸೇರಿರುವ ಜಾಗದಲ್ಲಿ ಅಕ್ರಮವಾಗಿ ಗ್ರಂಥಾಲಯ ನಿರ್ಮಾಣ ಮಾಡಿರುವ ಆರೋಪ ಗೌತಮ್‌ ಗಂಭೀರ್‌ ಅವರ ಮೇಲಿದೆ.

ADVERTISEMENT

ಈ ಜಾಗವು ಕಸ ವಿಲೇವಾರಿಗೆಂದು ಮೀಸಲಿಟ್ಟಿದ್ದ ಸ್ಥಳವಾಗಿದ್ದು, ದೆಹಲಿ ಪಾಲಿಕೆಯ ಹಿರಿಯ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಗೌತಮ್‌ ಗಂಭೀರ್ ಅವರು ಸ್ಥಳವನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಬಳಿಕ ಬಲವಂತದಿಂದ ಅಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ.

ಸುಮಾರು 300 ಎಕರೆಯಷ್ಟು ಭೂಮಿಯನ್ನು ಗಂಭೀರ್‌ ಸ್ವಾಧೀನ ಪಡಿಸಿಕೊಂಡಿದ್ದು. ಇದರ ಮೌಲ್ಯ ನೂರಾರು ಕೋಟಿ ಎಂದು ಅಂದಾಜಿಸಲಾಗಿದೆ.

ಅರ್ಜಿದಾರರ ಬೇಡಿಕೆ ಏನು?
ಗೌತಮ್‌ ಗಂಭೀರ್‌ ಅವರು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿರುವ ಸ್ಥಳವನ್ನು ಯಾವುದೇ ಕಾರಣಕ್ಕೂ ಅವರಿಗೆ ಬಳಕೆ ಮಾಡಲು ಅವಕಾಶ ನೀಡಕೂಡದು. ಗಂಭೀರ್ ಅವರ ಈ ಕೃತ್ಯವನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಅರ್ಜಿದಾರರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು, ದೂರಿನ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಗೌತಮ್‌ ಗಂಭೀರ್ ಹಾಗೂ ದೆಹಲಿ ಪಾಲಿಕೆಗೆ ಸಮನ್ಸ್‌ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.