ಮುಂಬೈ: ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಇತರ ಯೋಧರ ಗುಂಪು ವೈಯಕ್ತಿಕ ಅಪಘಾತ(ಜಿಪಿಎ) ವಿಮೆ ಹಣವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಪಾವತಿಸುವ ಮೂಲಕ ಸರ್ಕಾರಿ ಒಡೆತನದ ಎರಡು ವಿಮಾ ಕಂಪನಿಗಳು ಹೊಸ ದಾಖಲೆ ಮಾಡಿವೆ.
ಡಿಸೆಂಬರ್ 8ರಂದು ತಮಿಳುನಾಡಿನ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಎಂಐ–17ವಿ5 ಪತನಗೊಂಡು, ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಸಶಸ್ತ್ರ ಸೇನಾಪಡೆಯ ಇತರೆ 10 ಮಂದಿ ಯೋಧರು ಸಾವಿಗೀಡಾಗಿದ್ದರು. ಹಲವು ದಶಕಗಳಿಂದ ಭಾರತ ಕಂಡ ಅತಿ ದೊಡ್ಡ ವಾಯುಪಡೆಯ ದುರಂತ ಇದಾಗಿತ್ತು.
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯು ಜನರಲ್ ಬಿಪಿನ್ ರಾವತ್ ಮತ್ತು ಇತರೆ 7 ಯೋಧರ ವಿಮೆಯ ಹಣವನ್ನು ಕೇವಲ 30 ನಿಮಿಷದಲ್ಲಿ ಅವರ ಸ್ಯಾಲರಿ ಖಾತೆಗೆ ಜಮಾ ಮಾಡಿದೆ. ಇನ್ನೂ ಬ್ರಿಗೇಡಿಯರ್ ಲಿಡ್ಡರ್ ಅವರು ಖಾತೆ ಹೊಂದಿರುವುದಾಗಿ ಬ್ಯಾಂಕ್ನಿಂದ ಮಾಹಿತಿ ಬಂದ ಗಂಟೆಯಲ್ಲೇ ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪನಿಯು ವಿಮೆ ಇತ್ಯರ್ಥಪಡಿಸಿದೆ.
‘ಈ ಖಾತೆದಾರರು ಹುತಾತ್ಮರಾಗಿದ್ದಾರೆ ಎಂದು ಡಿಸೆಂಬರ್ 10ರಂದು ಬ್ಯಾಂಕ್ನಿಂದ ಪ್ರಾಥಮಿಕ ಮಾಹಿತಿ ದೊರೆಯಿತು. ಅದಾದ ಸ್ವಲ್ಪ ಸಮಯದಲ್ಲೇ ಕನಿಷ್ಠ ದಾಖಲೆಗಳ ಆಧಾರದ ಮೇಲೆ ವಿಮೆ ಹಣವನ್ನು ಪಾವತಿಸಿದೆವು’ಎಂದು ಯುಐಐ ಬ್ಯಾಂಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸತ್ಯಜಿತ್ ತ್ರಿಪಾಠಿ ಪಿಟಿಐಗೆ ತಿಳಿಸಿದ್ದಾರೆ.
ಜನರಲ್ ಬಿಪಿನ್ ರಾವತ್ ಸೇರಿ 8 ಯೋಧರಿಗೆ ಎಸ್ಬಿಐ ಜಿಪಿಎ ವಿಮೆ ಕವರ್ ಆಗಿದೆ ಎಂದು ಅವರು ತಿಳಿಸಿದರು.
ಸೇನಾಧಿಕಾರಿಗಳಿಗೆ ₹30 ಲಕ್ಷ ಮತ್ತು ವಾಯುಪಡೆ ಅಧಿಕಾರಿಗಳಿಗೆ ₹40 ಲಕ್ಷ ವಿಮೆ ಹಣವನ್ನು ಪಾವತಿಸಲಾಗಿದೆ ಎಂದು ತ್ರಿಪಾಠಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.