ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿಮೀರಿರುವ ವಾಯುಮಾಲಿನ್ಯ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಗ್ಯಾಸ್ ಚೇಂಬರ್ನಲ್ಲಿ ಜನರು ಬದುಕುವಂತೆ ಏಕೆ ಒತ್ತಡ ಹೇರಬೇಕು? ಅದರ ಬದಲು ಎಲ್ಲರನ್ನೂ ಒಂದೇ ಸಾರಿ ಕೊಂದುಬಿಡುವುದು ಉತ್ತಮ ಎಂದು ಹೇಳಿದೆ.
ಗ್ಯಾಸ್ ಚೇಂಬರ್ನಲ್ಲಿ ವಾಸಿಸುವಂತೆ ಜನರನ್ನು ಏಕೆ ಬಲವಂತ ಮಾಡಲಾಗುತ್ತಿದೆ? ಅದರ ಬದಲು ಒಂದೇ ದಿನ ಅವರನ್ನು ಕೊಲ್ಲುವುದು ಸೂಕ್ತ. ಅದಕ್ಕಾಗಿ 15 ಬ್ಯಾಗುಗಳಲ್ಲಿ ಸ್ಫೋಟಕ ತಂದು ಸ್ಫೋಟಿಸಿ ಎಲ್ಲರನ್ನೂ ಕೊಂದುಬಿಡಿ. ಈ ಎಲ್ಲದರಿಂದ ಜನರು ಏಕೆ ನರಳಬೇಕು? ಎಂದು ಸರ್ವೋಚ್ಚ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ.
ಮಾಲಿನ್ಯ ನಿಯಂತ್ರಣ ವಿಚಾರವಾಗಿ ಅವರಿವರನ್ನು ದೂಷಿಸುವ ಆಟ ನಡೆಯುತ್ತಿದೆ. ಈ ವಿಚಾರ ನಿಜಕ್ಕೂ ನನಗೆ ಆಘಾತ ಉಂಟುಮಾಡಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಮೂರ್ತಿ ಅರುಣ್ ಮಿಶ್ರಾ ಹೇಳಿದ್ದಾರೆ.
ದೆಹಲಿ ಮತ್ತದರ ಪಕ್ಕದ ಪ್ರದೇಶಗಳು ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿನ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ವಿಚಾರ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ಕೈಗೊಂಡಿತ್ತು.
ನಿಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಿಗೆ ಕುಳಿತುಕೊಳ್ಳಿ ಮತ್ತು ಯೋಜನೆಯನ್ನು ಅಂತಿಮಗೊಳಿಸಿ. 10 ದಿನಗಳೊಳಗೆ ವಿವಿಧ ಭಾಗಗಳಲ್ಲಿ ಗಾಳಿ ಶುದ್ಧೀಕರಣ ಗೋಪುರಗಳನ್ನು ಅಳವಡಿಸಿ ಎಂದು ದೆಹಲಿ ಮತ್ತು ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ನಿರ್ದೇಶನ ನೀಡಿದೆ.
ಈ ಮೊದಲು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವುದಕ್ಕೆ ಸರಿಯಾದ ದಾರಿ ಕಂಡುಕೊಂಡು ಹರಿಯಾಣ, ಪಂಜಾಬ್ ಹಾಗೂ ಉತ್ತರ ಪ್ರದೇಶ ಸರಕಾರಗಳು ಏಳು ದಿನಗಳ ಒಳಗಾಗಿ ಕ್ರಮ ಜರುಗಿಸುವಂತೆ ನಿರ್ದೇಶಿಸಿತ್ತು.ಹೀಗಿದ್ದರೂ ದೆಹಲಿಯ ವಾಯುಮಾಲಿನ್ಯ ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.