ADVERTISEMENT

ಬದಲಾವಣೆಗೆ ಒಂದು ಅವಕಾಶ ನೀಡಿ: ಮೇಘಾಲಯ, ನಾಗಾಲ್ಯಾಂಡ್‌ ಜನತೆಗೆ ಖರ್ಗೆ ಮನವಿ

ಪಿಟಿಐ
Published 27 ಫೆಬ್ರುವರಿ 2023, 4:51 IST
Last Updated 27 ಫೆಬ್ರುವರಿ 2023, 4:51 IST
   

ನವದೆಹಲಿ: ವಿಧಾನಸಭೆ ಚುನಾವಣೆ ನಡೆಯುತ್ತಿರುವ ಮೇಘಾಲಯ ಮತ್ತು ನಾಗಾಲ್ಯಾಂಡ್‌ ರಾಜ್ಯಗಳ ಜನತೆಗೆ ಬದಲಾವಣೆಗೆ ಒಂದು ಅವಕಾಶ ನೀಡಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಮನವಿ ಮಾಡಿದ್ದಾರೆ.

'ಮೇಘಾಲಯ ಮತ್ತು ನಾಗಾಲ್ಯಾಂಡ್ ಜನರು ಅಭಿವೃದ್ಧಿಪರ ಮತ್ತು ಜನರ ಒಳಿತಿಗಾಗಿ ಶ್ರಮಿಸುವ ಸರ್ಕಾರದ ನಿರೀಕ್ಷೆಯಲ್ಲಿದ್ದಾರೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಉತ್ತಮ ಭವಿಷ್ಯಕ್ಕಾಗಿ ಈ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಮತದಾರರಿಗೆ ಸ್ವಾಗತ. ಬದಲಾವಣೆಗೆ ಒಂದು ಅವಕಾಶ ನೀಡಿ ಎಂದು ಮೇಘಾಲಯ ಮತ್ತು ನಾಗಾಲ್ಯಾಂಡ್‌ನ ನನ್ನ ಸಹೋದರ ಮತ್ತು ಸಹೋದರಿಯರಿಗೆ ಮನವಿ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ADVERTISEMENT


ಬೆಳಿಗ್ಗೆ 7 ಗಂಟೆಯಿಂದ ಎರಡೂ ರಾಜ್ಯಗಳಲ್ಲಿ ಮತದಾನ ಆರಂಭವಾಗಿದೆ. ಸಂಜೆ 4 ಗಂಟೆವರೆಗೂ ನಡೆಯಲಿದೆ.

60 ಕ್ಷೇತ್ರಗಳಿರುವ ಎರಡೂ ರಾಜ್ಯಗಳಲ್ಲೂ ತಲಾ 59 ಕ್ಷೇತ್ರಗಳಿಗೆ ಮಾತ್ರ ಮತದಾನ ನಡೆಯುತ್ತಿದೆ. ನಾಗಾಲ್ಯಾಂಡ್‌ನ ಕ್ಷೇತ್ರವೊಂದರಲ್ಲಿ ಪ್ರತಿಸ್ಪರ್ಧಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದುಕೊಂಡ ಕಾರಣ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಘಾಲಯದ ಶಿಲ್ಲಾಂಗ್‌ ವಿಧಾನಸಭಾ ಕ್ಷೇತ್ರದ ಯುನೈಟೆಡ್‌ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಎಚ್‌.ಡಿ.ಆರ್. ಲಿಂಗ್ಡೊ ಅವರು ಮೃತಪಟ್ಟಿರುವುದರಿಂದ ಆ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ. ಎರಡೂ ರಾಜ್ಯಗಳಲ್ಲೂ ಉಗ್ರರ ದಾಳಿಯ ಭೀತಿ ಇರುವುದರಿಂದ ಬಿಗಿಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಮೇಘಾಲಯದಲ್ಲಿ 369 ಅಭ್ಯರ್ಥಿಗಳು ಕಣದಲ್ಲಿದ್ದರೆ, ನಾಗಾಲ್ಯಾಂಡ್‌ನಲ್ಲಿ 183 ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.