ADVERTISEMENT

ಗೋವಾದ ಮೇಲೆ ಗಮನ ಕೇಂದ್ರೀಕರಣ: ಆದಿತ್ಯ ಠಾಕ್ರೆ

ಪಿಟಿಐ
Published 12 ಫೆಬ್ರುವರಿ 2022, 20:38 IST
Last Updated 12 ಫೆಬ್ರುವರಿ 2022, 20:38 IST
ಆದಿತ್ಯ ಠಾಕ್ರೆ
ಆದಿತ್ಯ ಠಾಕ್ರೆ   

ಪಣಜಿ: ಬಿಜೆಪಿ ಜತೆಗೆ ಇದ್ದ ಸಖ್ಯದಿಂದಾಗಿ ಗೋವಾದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಬಿಜೆಪಿ ಬೆನ್ನಿಗೆ ಇರಿಯಿತು. ಹಾಗಾಗಿ, ಇನ್ನು ಮುಂದೆ ಗೋವಾದ ಎಲ್ಲ ಚುನಾವಣೆಗಳಲ್ಲಿಯೂ ಶಿವಸೇನಾ ಸ್ಪರ್ಧಿಸಲಿದೆ. ಪಂಚಾಯಿತಿಯಿಂದ ಲೋಕಸಭೆವರೆಗೆ ಎಲ್ಲ ಚುನಾವಣೆಗಳಲ್ಲಿಯೂ ಕಣಕ್ಕೆ ಇಳಿಯಲಿದೆ ಎಂದು ಪಕ್ಷದ ಮುಖಂಡ ಆದಿತ್ಯ ಠಾಕ್ರೆ ಅವರು ಶನಿವಾರ ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದರೂ ಗೋವಾದ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಿಲ್ಲ. ಗೋವಾ ಅಭಿವೃದ್ಧಿ ಆಗಲು ಶಿವಸೇನಾ ಅಧಿಕಾರದಲ್ಲಿ ಇರಬೇಕು ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಗೆ 2019ರಲ್ಲಿ ನಡೆದ ಚುನಾವಣೆಯ ಬಳಿಕ ಶಿವಸೇನಾ ಮತ್ತು ಬಿಜೆಪಿಯ ಮೈತ್ರಿ ಮುರಿದುಬಿತ್ತು. ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡಿರುವ ಶಿವಸೇನಾ, ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸುತ್ತಿದೆ.

ADVERTISEMENT

ಗೋವಾ ವಿಧಾನಸಭಾ ಚುನಾವಣೆಯಲ್ಲಿಎನ್‌ಸಿಪಿ ಜತೆಗೆ ಮೈತ್ರಿ ಮಾಡಿಕೊಂಡು ಸೇನಾ ಸ್ಪರ್ಧಿಸುತ್ತಿದೆ. ಈ ಬಾರಿ 10 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಮಗ ಉತ್ಪಲ್‌ ಪರಿಕ್ಕರ್‌ ಅವರು ಪಣಜಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ಕಣಕ್ಕೆ ಇಳಿದಿರುವ ಕಾರಣ ಈ ಕ್ಷೇತ್ರದ ಸೇನಾ ಅಭ್ಯರ್ಥಿಯು ಉಮೇದುವಾರಿಕೆ ಹಿಂದಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರದ ಹೊರಗೆಯೂ ಶಿವಸೇನಾವು ಇತ್ತೀಚಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಗೋವಾದಲ್ಲಿ ಸೇನಾದ ಪ್ರಚಾರಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಚುನಾವಣೆಯು ಸೇನಾದ ಭವಿಷ್ಯಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಇಲ್ಲಿನ ಜನರು ಮತ್ತು ಅವರ ಭವಿಷ್ಯಕ್ಕೆ ಸಂಬಂಧಿಸಿದ್ದು ಎಂದು ಮಹಾರಾಷ್ಟ್ರದ ಸಚಿವರೂ ಆಗಿರುವ ಆದಿತ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.