ಪಣಜಿ: ಜಾರ್ಖಂಡ್ ಸರ್ಕಾರ ಘೋಷಿಸಿರುವ ತನ್ನ ರಾಜ್ಯದ ಹೊಸ ಸಿನಿಮಾ ನೀತಿ ಹಿಂದಿ, ಬೆಂಗಾಳಿ ಮತ್ತು ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ನಿರ್ಮಿಸಲು ಉದ್ದೇಶಿಸಿರುವ ನಿರ್ಮಾಪಕರು ಮತ್ತು ತಂತ್ರಜ್ಞರಲ್ಲಿ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿದೆ.
ಇಲ್ಲಿ ನಡೆಯುತ್ತಿರುವ 49ನೇ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ, ಜಾರ್ಖಂಡ್ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಸುನಿಲ್ ಬರ್ನ್ವಾಲ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಸುಂದರವಾದ ಜಾರ್ಖಂಡ್ನಲ್ಲಿ ನಿರ್ಮಿಸುವ ಹಿಂದಿ, ಒರಿಯಾ ಮತ್ತು ಬೆಂಗಾಳಿ ಭಾಷೆಯ ಚಿತ್ರಗಳಿಗೆ ಅವುಗಳ ಒಟ್ಟು ನಿರ್ಮಾಣ ವೆಚ್ಚದ ಅರ್ಧದಷ್ಟನ್ನು ಅನುದಾನವಾಗಿ ನೀಡಲಾಗುವುದು. ಇತರ ಪ್ರಾದೇಶಿಕ ಸಿನಿಮಾಗಳಿಗೆ ಒಟ್ಟು ವೆಚ್ಚದ ಶೇ 25ರಷ್ಟು, ಚಿತ್ರದ ಅರ್ಧ ಭಾಗವನ್ನು ಜಾರ್ಖಂಡ್ನಲ್ಲಿ ಚಿತ್ರೀಕರಣ ಮಾಡುವ ನಿರ್ಮಾಪಕರಿಗೆ ₹1 ಕೋಟಿ, ಮೂರನೇ ಎರಡರಷ್ಟು ಭಾಗದ ಚಿತ್ರೀಕರಣ ಮಾಡುವವರಿಗೆ ₹2 ಕೋಟಿ ಅನುದಾನ ನೀಡುವ ಉದ್ದೇಶವಿದೆ ಎಂದರು.
ತುಳು ಚಿತ್ರ ಪಡ್ಡಾಯಿ ಪ್ರದರ್ಶನ
ಭಾನುವಾರ ಚಿತ್ರೋತ್ಸವದಲ್ಲಿ ಯುವ ನಿರ್ದೇಶಕ ಅಭಯ ಸಿಂಹ ನಿರ್ದೇಶನದ ತುಳು ಚಿತ್ರ ಪಡ್ಡಾಯಿ ಪ್ರದರ್ಶನಗೊಂಡಿತು. ಎಂಟು ದಿನಗಳ ಚಿತ್ರೋತ್ಸವ ಮುಕ್ತಾಯದ ಹಂತಕ್ಕೆ ಬಂದಿದೆ. ಉತ್ತಮ ಚಿತ್ರಗಳನ್ನು ನೋಡುವ ಆಸೆಯಿಂದ ದೇಶದ ಬಹುತೇಕ ಎಲ್ಲಾ ರಾಜ್ಯಗಳಿಂದ ಬಂದಿದ್ದ ಪ್ರತಿನಿಧಿಗಳಿಗೆ ಈ ವರ್ಷ ನಿರಾಸೆ ಆಗಿದೆ. ಅತ್ಯುತ್ತಮ ಎನ್ನಬಹುದಾದ ಚಿತ್ರಗಳ ಸಂಖ್ಯೆ ಕಡಿಮೆ ಇದೆ. ಕನ್ನಡ ಸೇರಿದಂತೆ ಇನ್ನೂ ಕೆಲ ಪ್ರಾದೇಶಿಕ ಭಾಷೆಗಳ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಪನೋರಮಾ ವಿಭಾಗದ ಚಿತ್ರಗಳೂ ಸೇರಿದಂತೆ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಚಿತ್ರಗಳನ್ನು ಆಯ್ಕೆ ಮಾಡುವ ಪದ್ಧತಿ ಬದಲಾಗಬೇಕು ಎನ್ನುವ ಮಾತುಗಳು ಪ್ರತಿನಿಧಿಗಳಿಂದ ಕೇಳಿ ಬಂದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.