ನವದೆಹಲಿ: ಸಣ್ಣ ಹೂಡಿಕೆದಾರರಿಗೆ ಕೇಂದ್ರ ಸರ್ಕಾರದ ಸಾಲಪತ್ರಗಳಲ್ಲಿ ನೇರವಾಗಿ ಹಣ ಹೂಡಿಕೆ ಮಾಡುವ ಸೌಲಭ್ಯಕ್ಕೆ ಇದೇ ಮೊದಲ ಬಾರಿಗೆ ಅವಕಾಶ ಲಭ್ಯವಾಗಿದೆ. ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ದರ ಕಡಿಮೆ ಇರುವ ಈ ಸಂದರ್ಭದಲ್ಲಿ, ಸಾಲ
ಪತ್ರಗಳಲ್ಲಿನ ಹೂಡಿಕೆಗಳು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿತವಾಗಿವೆ. ಅಲ್ಲದೆ, ಷೇರು ಮಾರುಕಟ್ಟೆಯಲ್ಲಿ ಇರುವಂತಹ ಏರಿಳಿತಗಳು ಸಾಲಪತ್ರಗಳಲ್ಲಿನ ಹೂಡಿಕೆಗಳಲ್ಲಿ ಇರುವುದಿಲ್ಲ.
ಈ ಸೌಲಭ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದ್ದಾರೆ. ಇಲ್ಲಿ ಸರ್ಕಾರಿ ಸಾಲಪತ್ರಗಳನ್ನು ಖರೀದಿಸುವುದು ಹಾಗೂ ಮಾರಾಟ ಮಾಡುವ ಪ್ರಕ್ರಿಯೆಯು ಷೇರುಗಳನ್ನು ಷೇರುಪೇಟೆಯಿಂದ ಖರೀದಿಸುವ, ಮಾರಾಟ ಮಾಡುವ ಪ್ರಕ್ರಿಯೆಯನ್ನು ಹೋಲುತ್ತದೆ. ಹೂಡಿಕೆಗಳಿಗೆ ಹೆಚ್ಚಿನ ಭದ್ರತೆಯನ್ನು ಬಯಸುವ ಹಾಗೂ ಬಹಳ ದೀರ್ಘ ಅವಧಿಗೆ ನಿಶ್ಚಿತ ಆದಾಯವನ್ನು ಬಯಸುವ ಪಿಂಚಣಿದಾರರು ಈ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ.
ಇದುವರೆಗೆ ಸರ್ಕಾರಿ ಸಾಲಪತ್ರಗಳಲ್ಲಿನ ಹೂಡಿಕೆಯಲ್ಲಿ ಮ್ಯೂಚುವಲ್ ಫಂಡ್ ಕಂಪನಿಗಳು, ಬ್ಯಾಂಕ್ಗಳು ಮತ್ತು ವಿಮಾ ಕಂಪನಿಗಳು ಹೆಚ್ಚಿನ ಪ್ರಾಬಲ್ಯ ಹೊಂದಿದ್ದವು. ‘ಈ ಕ್ರಮವು ಹಣಕಾಸಿನ ಒಳಗೊಳ್ಳುವಿಕೆಯನ್ನು ಉತ್ತೇಜಿಸಬಹುದು. ಅಸಂಘಟಿತ ವಲಯದಿಂದಲೂ ಬಂಡವಾಳ ಮಾರುಕಟ್ಟೆಗೆ ಹೆಚ್ಚಿನ ಹಣ ಹರಿದುಬರುವಂತೆ ಮಾಡಬಹುದು’ ಎಂದು ರೈಟ್ ರಿಸರ್ಚ್ ಸಂಸ್ಥೆಯ ಸಹ ಸಂಸ್ಥಾಪಕ ಸೋನಮ್ ಶ್ರೀವತ್ಸ ಹೇಳಿದ್ದಾರೆ. ಇಷ್ಟೇ ಅಲ್ಲದೆ, ಸಣ್ಣ ಹೂಡಿಕೆದಾರರ ಹಣವನ್ನು ಇದು ಬ್ಯಾಂಕ್ಗಳಿಂದ ನೇರವಾಗಿ ಆರ್ಬಿಐ ಕಡೆ ಒಯ್ಯುವ ಸಾಧ್ಯತೆಯೂ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯವರು, ಏಕೀಕೃತ ಬ್ಯಾಂಕಿಂಗ್ ಒಂಬುಡ್ಸ್ಮನ್ ವ್ಯವಸ್ಥೆಗೆ ಕೂಡ ಚಾಲನೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.